|
ಮುಖಪುಟ
/ನಮ್ಮ
ದೇವಾಲಯಗಳು
ಮಹಿಮಾನ್ವಿತ ನಾರಸಿಂಹದೇವರ ಶೀಬಿಕ್ಷೇತ್ರ
ಬೆಂಗಳೂರಿನಿಂದ
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸಾಗಿದರೆ ತುಮಕೂರು ದಾಟಿ 24 ಕಿಲೋ ಮೀಟರ್ ಮುಂದೆ
ಹೋಗುತ್ತಿದ್ದಂತೆ ರಸ್ತೆಯ ಪಕ್ಕದಲ್ಲೇ ಸುಂದರವಾದ ಹಾಗೂ ಪುರಾತನವಾದ ದೇವಾಲಯ
ಗೋಚರಿಸುತ್ತದೆ. ಇದುವೇ ಶೀಬಿ ಲಕ್ಷ್ಮೀನರಸಿಂಹ ಕ್ಷೇತ್ರ. ಈ ಕ್ಷೇತ್ರಕ್ಕೆ ಶೀಬಿ ಎಂದು
ಹೆಸರು ಬರಲು ಈ ತಾಣದಲ್ಲಿ ಶಿಬಿ ಎಂಬ ಮುನಿ ತಪವನ್ನಾಚರಿಸಿದ್ದೇ ಕಾರಣ ಎಂಬುದು ಐತಿಹ್ಯ.
ಪ್ರಹ್ಲಾದನ
ಮೊರೆ ಕೇಳಿ, ಕಂಬ ಸೀಳಿಬಂದ ಉಗ್ರನರಸಿಂಹ, ಹಿರಣ್ಯ ಕಶಿಪುವನ್ನು ಕೊಂದ ಬಳಿಕವೂ
ಶಾಂತನಾಗದೆ ಉಗ್ರನಾಗಿದ್ದಾಗ, ಎಲ್ಲ ದೇವಾನು ದೇವತೆಗಳೂ ಶೀಬಿ ಮುನಿಯ ಬಳಿ ಬಂದು
ನರಸಿಂಹನ ಕೋಪ ತಣಿಸುವಂತೆ ಕೇಳಿದರಂತೆ. ಆಗ ಶೀಬಿ ನರಸಿಂಹನ ಶಾಂತಗೊಳಿಸಿದನು. ಶಿಬಿಯ
ಕೋರಿಕೆಯಂತೆ ನರಸಿಂಹ ಇಲ್ಲಿ ಲಕ್ಷ್ಮೀಸಮೇತನಾಗಿ ಸಾಲಿಗ್ರಾಮಶಿಲೆಯಾಗಿ ಇಲ್ಲಿ
ನೆಲೆಸಿದನೆಂದು ಸ್ಥಳಪುರಾಣ ಹೇಳುತ್ತದೆ.
ಹಲವು
ವರ್ಷಗಳ ನಂತರ ಸಿರಾ ಪಟ್ಟಣದ ಅಮರಯ್ಯನೆಂಬ ಅಡಿಕೆ ವ್ಯಾಪಾರಿ ತುಮಕೂರು ಮಾರುಕಟ್ಟೆಗೆ
ಬರುವ ಮಾರ್ಗದಲ್ಲಿ ತನ್ನ ಪರಿವಾರದೊಂದಿಗೆ ಇಲ್ಲಿ ಇಳಿದು, ಆಳುಗಳಿಗೆ ಅಡುಗೆ ಮಾಡಲು
ಹೇಳಿ, ಮೊಸರು ತರಲು ಹೋಗಿ, ಹಿಂತಿರುಗಿದಾಗ, ಆತನ ಪರಿವಾರದವರೆಲ್ಲರೂ
ಮೂರ್ಛಿತರಾಗಿರುವುದನ್ನು ನೋಡುತ್ತಾನೆ. ಅವರು ಮಾಡಿದ ಅಡುಗೆಯೆಲ್ಲಾ
ರಕ್ತಮಯವಾಗಿರುತ್ತದೆ. ಅದನ್ನು ಕಂಡು ಅವನೂ ಕುಸಿದು ಬೀಳುತ್ತಾನೆ. ಆಗ ಭಗವಂತ
ಕನಸಿನಲ್ಲಿ ಕಾಣಿಸಿಕೊಂಡು, ನಿನ್ನಿಂದ ಅರಿಯದೇ ತಪ್ಪಾಗಿದೆ. ನಿನ್ನ ಆಳುಗಳು ನಾನು
ನೆಲೆಸಿಹ ಸಾಲಿಗ್ರಾಮಕ್ಕೆ ಅಗ್ನಿಸ್ಪರ್ಶ ಮಾಡಿ ಶಿಕ್ಷೆ ಅನುಭವಿಸಿದ್ದಾರೆ. ನೀನು ಇಲ್ಲಿ
ದೇವಾಲಯ ಕಟ್ಟು ಎಂದು ಅಪ್ಪಣೆಕೊಡಿಸುತ್ತಾರೆ.
ದೇವರ
ಆಣತಿಯಂತೆ ದೇವಾಲಯ ಕಟ್ಟಿಸಿ, ತನ್ನ ಪರಿವಾರದೊಂದಿಗೆ ಹಿಂತಿರುಗುತ್ತಾನೆ. ಈ ಸ್ಥಳ
ಮಹಿಮೆ ಅರಿತ ಮೈಸೂರು ಮಹಾರಾಜರು ದೇವಾಲಯಕ್ಕೆ ಹಲವು ರೀತಿಯ ಸಹಾಯ ಮಾಡಿದ್ದಾರೆ.
1799ರಲ್ಲಿ ಕರಣೀಕ ನಲ್ಲಪ್ಪನವರು ಹಳೆಯ ದೇವಾಲಯವಿದ್ದ ಜಾಗದಲ್ಲಿ ಈಗಿರುವ ದೇವಾಲಯ
ನಿರ್ಮಿಸಿದರು. ಪುರಾತನವಾದ ದೇವಾಲಯದ ಪ್ರವೇಶ ದ್ವಾರ ಶಿಥಿಲವಾಗಿದ್ದರೂ, ಒಳ ಪ್ರಾಕಾರದ
ಗುಡಿ ಗಟ್ಟಿಮುಟ್ಟಾಗಿದೆ. ದೇವಾಲಯದ ಭಿತ್ತಿಯಲ್ಲಿ ರಚಿಸಲಾಗಿರುವ ಅಳಿಸಲಾರದ ವರ್ಣ
ಚಿತ್ರಗಳು ಗಮನಸೆಳೆಯುತ್ತವೆ.
ಶಿವಲಿಂಗ
– ಈ ದೇವಾಲಯದಲ್ಲಿ ಅರ್ಧ
ಕಪ್ಪು, ಅರ್ಧ ಕೇಸರಿಬಣ್ಣದ ಶಿಲೆಯ ವಿಶೇಷ ಶಿವಲಿಂಗವಿದ್ದು, ಇದನ್ನು ಅರ್ಧನಾರೀಶ್ವರ,
ಚಂದ್ರಮೌಳೇಶ್ವರ ಎಂದು ಕರೆಯುತ್ತಾರೆ.
ಮುಖ್ಯದೇವಾಲಯದಲ್ಲಿ ಸಾಲಿಗ್ರಾಮ ರೂಪಿ ಲಕ್ಷ್ಮೀನರಸಿಂಹ ದೇವರ ಮೂರ್ತಿಯಿದೆ.
ಅಕ್ಕಪಕ್ಕದಲ್ಲಿ ಲೋಕಾಂಬ ಮತ್ತು ಚೆಂಚುಮಾಂಬರ ದೇವಾಲಯಗಳಿವೆ.
ಪ್ರತಿವರ್ಷ
ಮಾಘ ಮಾಸದ ರಥಸಪ್ತಮಿಯ ಬಳಿಕ ಪುಬ್ಬಾ ನಕ್ಷತ್ರ ಬರುವ ದಿನ ಇಲ್ಲಿ ರಥೋತ್ಸವ
ಜರುಗುತ್ತದೆ.
ದೇವಾಲಯದ
ಮುಂದೆ 10 ಅಡಿ ವ್ಯಾಸದ ಕಲ್ಲಿನ ಚಕ್ರಗಳಿದ್ದು, ಹಿಂದೆ ಇಲ್ಲಿ ಕಲ್ಲಿನ ಚಕ್ರದ ಬೃಹತ್
ರಥ ಕಟ್ಟುತ್ತಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ. ಹಳೆಯ ದೇವಾಲಯದ ಗೋಪುರಗಳಲ್ಲಿ
ಪಂಚಮುಖದ ಗಣಪತಿ, ಸುಬ್ರಹ್ಮಣ್ಯ ಮೊದಲಾದ ದೇವತಾಮೂರ್ತಿಗಳ ಮೂರ್ತಿಗಳಿವೆ. ದೇವಾಲಯದ
ಪ್ರಾಕಾರದಲ್ಲಿ ಹಲವು ಗೋಪಾಲಕೃಷ್ಣ ಮೊದಲಾದ ದೇವತಾ ಮೂರ್ತಿಗಳಿವೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಮುಖಪುಟ
/ನಮ್ಮ
ದೇವಾಲಯಗಳು |