| |
ಮುಖಪುಟ
/ನಮ್ಮದೇವಾಲಯಗಳು
ಯಗಟಿಪುರ ಶ್ರೀಪ್ರಸನ್ನ
ಮಲ್ಲಿಕಾರ್ಜುನಸ್ವಾಮಿ ದೇವಾಲಯ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಯಗಟಿಪುರ ಶ್ರೀಪ್ರಸನ್ನ
ಮಲ್ಲಿಕಾರ್ಜುನಸ್ವಾಮಿ ನೆಲೆಸಿಹ ಪುಣ್ಯಕ್ಷೇತ್ರ. ಇಲ್ಲಿ ಶ್ರೀಪ್ರಸನ್ನ
ಮಲ್ಲಿಕಾರ್ಜುನಸ್ವಾಮಿ ನೆಲೆಸಿದ ಬಗ್ಗೆ ಗ್ರಾಮದಲ್ಲಿ ಒಂದು ಜನಜನಿತ ಕಥೆಯಿದೆ.
ಹಿಂದೆ ಹರಿಹರ ಸೋಮೇಶ್ವರ ಸಾರ್ವಭೌಮನ ಆಡಳಿತಕ್ಕೆ ಒಳಪಟ್ಟಿದ್ದ ಕಾಲದಲ್ಲಿ
ವೀರಶೆಟ್ಟಿ ಎಂಬುವವರಿಗೆ ಅರನತೊಳಲು ಗೌಡಿಕೆಯಿತ್ತು. ಆತನ ಬಳಿ ಗೋವುಗಳು
ಸಮೃದ್ಧವಾಗಿದ್ದವು. ಅವುಗಳಲ್ಲಿ ಕಪಿಲೆ ಎಂಬ ಹಸುವೂ ಇತ್ತು. ಆ ಹಸು ವೇದಾವತಿ ನದಿಯ
ಎಡದಂಡೆಯ ಗುಡ್ಡಗಳ ಬಳಿ ಇದ್ದ ಹುತ್ತಕ್ಕೆ ನಿತ್ಯ ಸ್ವಯಂ ಹಾಲು ಕರೆಯುತ್ತಿತ್ತು. ಈ
ವಿಷಯ ತಿಳಿದ ಗೌಡರು ಆಳುಗಳೊಂದಿಗೆ ಹೋಗಿ ಹುತ್ತ ಅಗೆದು ನೋಡಿದಾಗ ಅಲ್ಲಿ
ಭೀಭತ್ಸರೂಪದ ಹಾವು ಕಾಣಿಸಿಕೊಂಡಿತು. ಹಾವಿಗೆ ಪೂಜೆ ಮಾಡಿದ ಬಳಿಕ ಸೌಮ್ಯವಾದ ಹಾವು
ಪೂರ್ವದಿಕ್ಕಗೆ ಹೋಯಿತು. ಸರ್ಪ ಮಂಡಲಾಕಾರವಾಗಿ ಮಲಗಿದ್ದ ಜಾಗದಲ್ಲಿ ಶಿವಲಿಂಗ
ಗೋಚರಿಸಿದಂತಾಯಿತು. ಮನೆಗೆ ಹೋಗಿ ಗೌಡರು ಮಲಗಿದಾಗ ಶಿವ ಜಂಗಮ ರೂಪದಲ್ಲಿ
ಕಾಣಿಸಿಕೊಂಡು, ತಾನು ಮಲ್ಲಾಸುರನೆಂಬ ಅಸುರನನ್ನು ಸಂಹರಿಸಿದ ಶಂಕರ, ಈ ಸ್ಥಳದಲ್ಲಿ
ಲಿಂಗರೂಪಿಯಾಗಿ ನೆಲೆಸಿರುವುದಾಗಿ, ತನಗೊಂದು ಗುಡಿ ಕಟ್ಟಿಸಿ ಪೂಜಿಸಿದರೆ,
ಮಕ್ಕಳಿಲ್ಲದ ನಿನಗೆ ಮಗ ಹುಟ್ಟುತ್ತಾನೆ ಎಂದು ಹೇಳಿ ಅದೃಶ್ಯನಾದ. ಗೌಡರು ಮಾರನೆ
ದಿನ ಪುರಜನರೊಂದಿಗೆ ಆ ಸ್ಥಳಕ್ಕೆ ಹೋಗಿ ಲಿಂಗವನ್ನು ಶುದ್ಧಗೊಳಿಸಿ ಅಲ್ಲಿ ಎರಡು
ಅಂಕಣದ ದೇವಾಲಯ ನಿರ್ಮಿಸಿ, ಶಿವನನ್ನು ಪೂಜಿಸಿದರು. ಇದರ ಫಲವಾಗಿ ಅವರಿಗೆ
ಪುತ್ರಭಾಗ್ಯ ಲಭಿಸಿತು. ಮನಿಗೆ ಮಲ್ಲಿಕಾರ್ಜುನ ಎಂದೇ ಹೆಸರಿಟ್ಟರು.
ಈ ವಿಷಯ ತಿಳಿದ ಹರಿಹರ ಸೋಮೇಶ್ವರ ಕೂಡ ಈ ದೇವರಿಗೆ ಹರಕೆ
ಹೊತ್ತು, ಮಕ್ಕಳಿಲ್ಲದ ತನಗೂ ಪುತ್ರಭಾಗ್ಯ ಕರುಣಿಸುವಂತೆ ಕೋರಿ, ಸಂತಾನಭಾಗ್ಯ
ಪಡೆದನು. ಹರಕೆ ಹೊತ್ತಂತೆ ದೇವಾಲಯವನ್ನು ವಿಸ್ತರಿಸಿ, ಅಭಿವೃದ್ಧಿಪಡಿಸಿದನು.
ದೇವರಿಗೆ ಜಮೀನು, ಗದ್ದೆಗಳನ್ನು ಮಾನ್ಯ ಹಾಕಿಕೊಟ್ಟನು ಎಂದು ತಿಳಿದುಬರುತ್ತದೆ.
ರಾಜ ಇಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ವೆಂಗಟಿ ಹಾಗೂ ಎಲೆ ಹುಣಸೆ ಎಂಬ
ವೇಶ್ಯೆಯರ ನಾಟ್ಯಗಾನಕ್ಕೆ ಮೆಚ್ಚಿ ರಾಜ ಎರಡು ಊರು ಕಟ್ಟಿಸಿ ಆ ಊರುಗಳಿಗೆ ಅವರ
ಹೆಸರನ್ನೇ ಇಟ್ಟನಂತೆ. ಕಾಲಾನಂತರದಲ್ಲಿ ವೆಂಗಟಿ ಯಗಟಿಯಾಗಿ ಎಲೆ ಹುಣಸೆ
ರೂಪಾಂತರವಾಗಿ ಎಳ್ಳಂಬಳಸೆ ಆಗಿದೆ ಎಂದು ತಿಳಿದುಬರುತ್ತದೆ.
ಇಲ್ಲಿ ಅಂದು ರಾಜ ಕಟ್ಟಿಸಿದ ದೇವಾಲಯ ಪ್ರಸ್ತುತ ಮುಜರಾಯಿ
ಇಲಾಖೆ ವ್ಯಾಪ್ತಿಗೆ ಒಳಪಟ್ಟಿದೆ. ನಿತ್ಯವೂ ಇಲ್ಲಿ ಅಭಿಷೇಕ, ಪೂಜೆ, ಅಲಂಕಾರಾದಿಗಳು
ನಡೆಯುತ್ತವೆ. ಪ್ರತಿ ವರ್ಷ ಫಾಲ್ಗುಣ ಶುದ್ಧದಲ್ಲಿ ಮಘಾ ನಕ್ಷತ್ರದ ದಿನ ಶ್ರೀ
ಪ್ರಸನ್ನ
ಮಲ್ಲಿಕಾರ್ಜುನ ಸ್ವಾಮಿಗೆ ರಥೋತ್ಸವ ನಡೆಯುತ್ತದೆ. ಪಂಚರಾತ್ರಾಗಮದ ರೀತ್ಯ
ಐದು ದಿನಗಳ ಕಾಲ ವಿಶೇಷ ಪೂಜೆಗಳು ಜರುಗುತ್ತವೆ. ಕೋಡಿಹಳ್ಳಿಯ ಮೂಲ್ವೀಕರು, ಯಗಟಿ
ಮತ್ತು ಎಳ್ಳಂಬಳಸೆ, ಪುರ ಜನರು ಹಾಗೂ ಹತ್ತೂರಿನ ಸಮಸ್ತರು ಈ ಜಾತ್ರಾ
ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಪುಬ್ಬಾ ನಕ್ಷತ್ರದಲ್ಲಿ ರಾತ್ರಿ ಇಲ್ಲಿ
ನಡೆಯುವ ಗಂಗೋದ್ಭವ ಹಾಗೂ ಬೆಳಗ್ಗೆ ನಡೆಯುವ ಬಲಿಹರಣ ಪೂಜೆ, ಅವಭೃತ ಸ್ನಾನ,
ಓಕಳಿಯಾಟ ವಿಶೇಷವಾದದ್ದು. ರಥೋತ್ಸವ ಕಾಲದಲ್ಲಿ ಧ್ವಜಾರೋಹಣ, ಕಲಶ ಸ್ಥಾಪನೆ,
ಅಂಕುರಾರ್ಪಣೆ, ವೃಷಭ ವಾಹನೋತ್ಸವ, ಗಿರಿಜಾ ಕಲ್ಯಾಣ, ಗಜಾರೋಹಣೋತ್ಸವ, ಕೃಷ್ಣ
ಗಂಧೋತ್ಸವ, ಮಹಾರಥೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತವೆ.
ದೇವಾಲಯಕ್ಕೆ ಭವ್ಯವಾದ ಮೂರು ಅಂತಸ್ತಿನ ರಾಜಗೋಪುರವಿದೆ.
ಪಂಚಕಳಶಗಳಿಂದ ಕೂಡಿದ ಗೋಪುರದಲ್ಲಿ ಹಸು, ಶಿವಗಣ, ಪರಿವಾರ ದೇವತೆಗಳ ಗಾರೆಯ
ಶಿಲ್ಪಗಳಿವೆ. ಗರ್ಭಗೃಹದ ಮೇಲಿನ ಗೋಪುರಗಳಲ್ಲಿ ದುರ್ಗೆ, ಗಣಪತಿ ಮೊದಲಾದ ಗಾರೆಯ
ಪ್ರತಿಮೆಗಳಿವೆ.
ಪ್ರಧಾನ ಗರ್ಭಗೃಹದಲ್ಲಿ ಶ್ರೀ ಮಲ್ಲಿಕಾರ್ಜುನಸ್ವಾಮಿಯ
ಶಿವಲಿಂಗವಿದೆ. ಇಲ್ಲಿ
ವಿಘ್ನೇಶ್ವರ,
ನವಗ್ರಹ, ಶ್ರೀ ಚೌಡೇಶ್ವರಿ ಅಮ್ಮನವರು, ಶ್ರೀ
ವೀರಭದ್ರಸ್ವಾಮಿ, ನಾಗ ದೇವತೆಗಳು, ಭದ್ರಕಾಳಮ್ಮ ಹಾಗೂ ಅಂತರ ಘಟ್ಟಮ್ಮನವರ
ಗುಡಿಗಳೂ
ಇವೆ. ದೇವಾಲಯದಲ್ಲಿ ಪುರಾತನವಾದ ಹಾಗೂ ಶಿಲ್ಪಕಲಾವೈಭವದಿಂದ ಕೂಡಿದ
ಕಲ್ಲಿನ ದೊಡ್ಡ ರಥವೂ ಇದೆ. ದೇವಾಲಯದ ಸಮೀಪ ಭಕ್ತಾದಿಗಳ ಅನುಕೂಲಕ್ಕಾಗಿ ಭವ್ಯವಾದ
ಕಲ್ಯಾಣ ಮಂದಿರವನ್ನೂ ನಿರ್ಮಿಸಲಾಗಿದೆ.
ಮಾರ್ಗ :
ಬೀರೂರು
ರೈಲ್ವೆ ನಿಲ್ದಾಣದಿಂದ ಮತ್ತು ಬಸ್ ನಿಲ್ದಾಣದಿಂದ ಪುರ ಕ್ಷೇತ್ರಕ್ಕೆ 20 ಕಿಲೋ
ಮೀಟರ್. ಪುರ ಬಸ್ ನಿಲ್ದಾಣದಲ್ಲಿ ಇಳಿದು ದಕ್ಷಿಣಕ್ಕೆ ನೋಡಿದರೆ ಶ್ರೀ ಪ್ರಸನ್ನ
ಮಲ್ಲಿಕಾರ್ಜುನ ಸ್ವಾಮಿ ದೇವಾಲಯ ಕಾಣಿಸುತ್ತದೆ. ಪ್ರಸ್ತುತ ನೂತನವಾಗಿ
ಪ್ರತಿಷ್ಠಾಪಿಸಲಾಗಿರುವ 25 ಅಡಿ ಎತ್ತರದ ಈಶ್ವರನ ಪ್ರತಿಮೆ ದೇವಾಲಯದ ಪ್ರಧಾನ
ಆಕರ್ಷಣೆಯಾಗಿದೆ.
(ಮಾಹಿತಿ:
ಪಿ.ಎಂ. ಶಂಕರಪ್ಪ, ಕನ್ವೀನರ್, ಶ್ರೀಮಲ್ಲಿಕಾರ್ಜುನಸ್ವಾಮಿ ದೇವಾಲಯ,
ಯಗಟಿಪುರ, ಕಡೂರು ತಾಲೂಕು, ಚಿಕ್ಕಮಗಳೂರು ಜಿಲ್ಲೆ. ದೂರವಾಣಿ – 08267-740045.
ಮುಖಪುಟ
/ನಮ್ಮದೇವಾಲಯಗಳು |

|
|