|
ಮುಖಪುಟ
/ನಮ್ಮದೇವಾಲಯಗಳು
ಕಾವೇರಿ ದಂಡೆಯ ನಿಮಿಷಾಂಬಾ
ಸನ್ನಿಧಿ
*ಟಿ.ಎಂ.
ಸತೀಶ್
ರಂಗನಾಥನ
ನೆಲೆವೀಡು ಶ್ರೀರಂಗಪಟ್ಟಣಕ್ಕೆ ಕೇವಲ 2 ಕಿಲೋ ಮೀಟರು ದೂರದಲ್ಲಿರುವ ಗಂಜಾಂ ಬಳಿಯ
ಪವಿತ್ರ ಪುಣ್ಯ ಕ್ಷೇತ್ರವೇ ನಿಮಿಷಾಂಬಾ ಸನ್ನಿಧಿ. ಕಾವೇರಿ ನದಿಯ ದಕ್ಷಿಣ ದಂಡೆಯ
ಮೇಲಿರುವ ಈ ಕ್ಷೇತ್ರದಲ್ಲಿ ತಾಯಿ ನಿಮಿಷಾಂಬಾ ದೇವಿಯ ಭವ್ಯ ದೇವಾಲಯವಿದೆ.
ನಿಮಿಷಾಂಬಾ ದೇವಿ ಹುಟ್ಟಿನ ಬಗ್ಗೆ ಸ್ಥಳಪುರಾಣದಲ್ಲಿ ಜನಜನಿತ ಕಥೆ ಇದೆ.
ಐತಿಹ್ಯ: ಕ್ರಿ.ಶ.
1548ರಲ್ಲಿ ಶ್ರೀರಂಗಪಟ್ಟಣವನ್ನು ಆಳುತ್ತಿದ್ದ ಸುಮನಸ್ಕ ಎಂಬ ದೊರೆ, ತನ್ನ ಜನರ
ಕ್ಷೇಮಕ್ಕಾಗಿ ಯಾಗವನ್ನಾಚರಿಸಲು ನಿರ್ಧರಿಸಿದನಂತೆ, ಋಷಿ ಮುನಿಗಳು ಈ ಯಾಗಕ್ಕೆ
ಸೂಕ್ತ ಸ್ಥಳವೆಂದು ಗಂಜಾಂ ಬಳಿಯ ಕಾವೇರಿ ತಟವನ್ನು ಆಯ್ಕೆ ಮಾಡಿದರು. ಯಾಗ
ಆರಂಭವಾದಾಗ ಸುಮಂಡಲ ಮತ್ತು ಜಾನು ಎಂಬ ರಕ್ಕಸರು ಅಡ್ಡಿಪಡಿಸಲಾರಂಭಿಸಿದರು. ದಾರಿ
ಕಾಣದೆ ಋಷಿಮುನಿಗಳು ದೇವಿ ಆದಿ ಪರಾಶಕ್ತಿಯ ಮೊರೆಹೋದರು. ಆಗ ತಾಯಿ
ನಿಮಿಷಮಾತ್ರದಲ್ಲಿ ಹೋಮಕುಂಡದಿಂದ ಆವಿರ್ಭವಿಸಿ ದುಷ್ಟ ಸಂಹಾರ ಮಾಡಿದಳು. ತಾನು
ಇಲ್ಲಿಯೇ ನೆಲೆಸಿ ಬೇಡಿ ಬರುವ ಭಕ್ತರ ಸಂಕಷ್ಟವನ್ನು ನಿಮಿಷ ಮಾತ್ರದಲ್ಲಿ
ಬಗೆಹರಿಸುವೆ ಎಂದು ಹೇಳಿ, ಹೋಮಕುಂಡದಿಂದ ಎದ್ದು 48 ಹೆಜ್ಜೆ ಇಟ್ಟು ಶಿಲೆಯಾಗಿ
ಹೋದಳಂತೆ. ಹೀಗಾಗೇ ಈ ದೇವರಿಗೆ ಸ್ವಯಂಭು ಎಂದು ಕರೆಯಲಾಗುತ್ತದೆ.
ಇಂದಿಗೂ
ತಾಯಿ ಇಲ್ಲಿ ನಿಮಿಷಾಂಬಾ ಎಂಬ ಹೆಸರಿನಿಂದ ನೆಲೆಸಿ, ಭಕ್ತರನ್ನು ಸಲಹುತ್ತಿದ್ದಾಳೆ.
ತಾಯಿಗೆ ಇಲ್ಲಿ ಭವ್ಯವಾದ
ಆಲಯ ನಿರ್ಮಿಸಲಾಗಿದೆ. ನಾಲ್ಕು ಅಂತಸ್ತಿನ ಸುಂದರವಾದ ರಾಜ ಗೋಪುರದಲ್ಲಿ ವಿವಿಧ
ದೇವಾನು ದೇವತೆಗಳ ಮೂರ್ತಿಗಳಿವೆ, ಕಲ್ಲಿನ ಆವರಣ ಗೋಡೆಯಲ್ಲಿ ಸರಳ ಕೆತ್ತನೆಗಳಿವೆ.
ಭವ್ಯ ಕೆತ್ತನೆಯ ತೇಗದ ಬಾಗಿಲುಗಳನ್ನೊಳಗೊಂಡ ಪ್ರದೇಶ ದ್ವಾರವಿದೆ. ದ್ವಾರದ
ಪಕ್ಕದಲ್ಲಿ ಸುಂದರವಾದ ಲಕ್ಷ್ಮೀ ಹಾಗೂ ಸರಸ್ವತಿಯ ಮೂರ್ತಿಯಿದೆ. ದ್ವಾರ
ಪ್ರವೇಶಿಸಿದರೆ, ವಿಶಾಲವಾದ ಪ್ರಕಾರವಿದೆ. ಎದುರು ಮೂರು ಗರ್ಭಗುಡಿಗಳಿವೆ.
ಒಂದರಲ್ಲಿ ಮೌಕ್ತಿಕೇಶ್ವರ, ಮತ್ತೊಂದರಲ್ಲಿ ಲಕ್ಷ್ಮೀನಾರಾಯಣ ಹಾಗೂ ನಿಮಿಷಾಂಬಾ
ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ನಿಮಿಷಾಂಬಾ ದೇವಿ ದೇವಾಲಯದಲ್ಲಿ
ಶ್ರೀಚಕ್ರವನ್ನು ಸಹ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಬಲ ಭಾಗದಲ್ಲಿ ನವಗ್ರಹ
ದೇವಾಲಯವಿದೆ.
ಗರ್ಭಗೃಹಗಳ ಮೇಲಿರುವ ಗೋಪುರಗಳಲ್ಲಿಯೂ ದೇವತಾ ಮೂರ್ತಿಗಳ ಪ್ರತಿಮೆಗಳಿವೆ. ಪ್ರತಿ
ಹುಣ್ಣಿಮೆ ರಾತ್ರಿ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಈ ದೇವಾಲಯಕ್ಕೆ ಬರುವ
ಭಕ್ತರು ಮೊದಲಿಗೆ ಕಾವೇರಿ ನದಿಯಲ್ಲಿ ಆಟವಾಡಿ, ಮಿಂದು ದೇವರ
ದರ್ಶನ
ಪಡೆಯುತ್ತಾರೆ. ಶುಕ್ರವಾರಗಳಂದು ಹಾಗೂ ರಜಾ ದಿನಗಳಂದು ಇಲ್ಲಿಗೆ ಭಕ್ತರ ಪೂರವೇ
ಹರಿದುಬರುತ್ತದೆ.
ದೇವಾಲಯದ ಸುತ್ತಲೂ ಅಂಗಡಿಗಳಿದ್ದು ಇಲ್ಲಿ ನಿತ್ಯ ಜಾತ್ರೆಯಂತೆ ಕಾಣುತ್ತದೆ.
ನದಿಯಿಂದ ದೇವಾಲಯಕ್ಕೆ ಬರುವ ಮಾರ್ಗದಲ್ಲಿ ಬೃಹದಾಕಾರವಾದ ಅಶ್ವತ್ಥವೃಕ್ಷವಿದೆ.
ನದಿಗೆ ಹೋಗುವ ಮಾರ್ಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು, ಮೆಟ್ಟಿಲುಗಳ
ಮೇಲೆ ಸಿಮೆಂಟಿನಿಂದ ನಿರ್ಮಿಸಿದ ಸಿಂಹದ ಬೊಂಬೆಗಳಿವೆ.
ಮುಖಪುಟ
/ನಮ್ಮದೇವಾಲಯಗಳು |