|
ನಗರ್ತಪೇಟೆಯ ನಗರೇಶ್ವರ ದೇವಾಲಯ *ಟಿ.ಎಂ.ಸತೀಶ್
ಬೆಂಗಳೂರಿನ ಕರಗ ಖ್ಯಾತಿಯ ಧರ್ಮರಾಯನ ದೇವಾಲಯದ ಪಕ್ಕದ ರಸ್ತೆಯಲ್ಲಿ ಸಾಗಿದರೆ, ನಗರ್ತಪೇಟೆಯನ್ನು ನಾವು ಪ್ರವೇಶಿಸುತ್ತೇವೆ. ಈ ಮುಖ್ಯರಸ್ತೆಯಲ್ಲೇ ಭವ್ಯವಾದ ವಿಜಯನಗರ ಶೈಲಿಯ ರಾಯಗೋಪುರ ಸ್ವಾಗತಿಸುತ್ತದೆ. ಇದುವೇ ನಗರೇಶ್ವರ ದೇವಸ್ಥಾನ. ಈ ದೇವಾಲಯವನ್ನು ಸುಮಾರು 250 ವರ್ಷಗಳ ಹಿಂದೆ ಕೆಂಪನಂಜುಂಡಪ್ಪ ಎಂಬ ನಗರ್ತ ಮುಖಂಡರು ನಿರ್ಮಿಸಿದರು ಎಂದು ತಿಳಿದುಬರುತ್ತದೆ. ಹೀಗೆ ನಗರ್ತರು ನಗರದಲ್ಲಿ ಸ್ಥಾಪಿಸಿದ ದೇವರಿಗೆ ನಗರೇಶ್ವರ ಎಂಬ ಹೆಸರು ಬಂದಿದೆ.
ಮೂಲಗರ್ಭಗೃಹದಲ್ಲಿ ನಗರೇಶ್ವರ ಲಿಂಗವಿದೆ. ಶಿವಲಿಂಗದ ಎದುರು ನಂದಿಯ ಮೂರ್ತಿಯಿದೆ. ಗರ್ಭಗೃಹದ ಹೊರ ಆವರಣದ ಕಲ್ಲಿನ ಬಾಗಿಲವಾಡದಲ್ಲಿ ದ್ವಾರಪಾಲಕರ ಉಬ್ಬುಶಿಲ್ಪವಿದೆ. ಮೇಲ್ಭಾಗದಲ್ಲಿ ನಂದಿ ಹಾಗೂ ಸರ್ಪಭೂಷಣನಾದ ಲಿಂಗದ ಮೂರ್ತಿಯಿದೆ. ಲಿಂಗದ ಎಡ ಭಾಗದ ಗರ್ಭಗೃಹದಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ನಿರ್ಮಿಸಲಾದ ತಾಯಿ ಅನ್ನಪೂರ್ಣೆಶ್ವರಿಯ ಸುಂದರ ಮೂರ್ತಿಯಿದೆ. ಬಲ ಭಾಗದಲ್ಲಿ ಗಣಪತಿಯ ವಿಗ್ರಹವಿದೆ. ಅದರ ಪಕ್ಕದಲ್ಲಿ ಇರುವ ಮತ್ತೊಂದು ಗರ್ಭಗೃಹದಲ್ಲಿ ವೀರಭದ್ರಮೂರ್ತಿ ಹಾಗೂ ಅದರ ಪಕ್ಕದ ಗುಡಿಯಲ್ಲಿ ಆರು ತಲೆಯ ಮಯೂರಾರೂಢ ಷಣ್ಮುಖನ ಮನೋಹರ ಪ್ರತಿಮೆಯಿದೆ. ಇದರ ಮಧ್ಯೆ ಪುರಾತನವಾದ ಉತ್ಸವಮೂರ್ತಿಯಿದೆ.
ಪ್ರಸ್ತುತ ದೇವಾಲಯದ ಪ್ರಧಾನ ಅರ್ಚಕರಾಗಿರುವ ಆಗಮ ಪಂಡಿತರಾದ ಜಿ. ಅರುಣಾಚಲ ದೀಕ್ಷಿತರು ಶೈವಾಗಮ ಪದ್ಧತಿಯಂತೆ ಪೂಜಾ ಕೈಂಕರ್ಯಗಳನ್ನು ನಡೆಸುತ್ತಿದ್ದಾರೆ.. ನವರಾತ್ರಿಯಲ್ಲಿ ಇಲ್ಲಿ ಪದ್ಮಾಸನಸ್ಥಿತೆಯಾದ ಅನ್ನಪೂರ್ಣೆಶ್ವರಿಗೆ ನಾನಾ ವಿಧದ ಅಲಂಕಾರಗಳನ್ನು ಮಾಡಲಾಗುತ್ತದೆ. ಪ್ರಾಪ್ತ ವಯಸ್ಸಿಗೆ ಬಂದು ಬಹುಕಾಲ ಮದುವೆಯಾಗದವರು ಇಲ್ಲಿ ಬಂದು ತಾಯಿಗೆ ಹರಕೆ ಹೊರುತ್ತಾರೆ. ಹರಕೆ ಹೊತ್ತ ಕೆಲವೇ ದಿನದಲ್ಲಿ ಅವರಿಗೆ ಮದುವೆ ಆದ ನಿದರ್ಶನಗಳಿವೆ ಎನ್ನುತ್ತಾರೆ ಸ್ಥಳೀಯರು.
ಹಠ ಮಾಡುವ ಮಕ್ಕಳನ್ನು ಕರೆತಂದು ಇಲ್ಲಿ ಪೂಜೆ ಮಾಡಿಸಿದರೆ ಅವರು ಶಾಂತಸ್ವಭಾವದವರಾಗುತ್ತಾರೆ ಎಂಬುದು ಪ್ರತೀತಿ. ಈ ಹಿಂದೆ ಇಲ್ಲಿ ಪ್ರಧಾನ ಅರ್ಚಕರಾಗಿದ್ದ ಡಾ.ಎನ್. ಗುಂಡಪ್ಪ ದೀಕ್ಷಿತರು, ಎಂ.ಎ. ಪಿ.ಎಚ್.ಡಿ. ಪದವಿ ಪಡೆದು ಧಾರ್ಮಿಕ ದತ್ತಿ ಇಲಾಖೆಯಲ್ಲಿ ಉನ್ನತಾಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ತಮ್ಮ ಸೇವೆಯನ್ನು ದೇವರಿಗೆ ಮುಡಿಪಾಗಿಟ್ಟಿದ್ದರು. ಹೆಚ್ಚಿನ ಮಾಹಿತಿಗೆ, ಪೂಜಾ ಕೈಂಕರ್ಯಗಳಿಗೆ ಅರ್ಚಕರಾದ ಶ್ರೀ ಅರುಣಾಚಲ ದೀಕ್ಷಿತರನ್ನು ದೂರವಾಣಿ 9342826785 ಅಥವಾ 22279470 ಮೂಲಕ ಸಂಪರ್ಕಿಸಬಹುದು. | |||