|
ಮುಖಪುಟ
/ನಮ್ಮದೇವಾಲಯಗಳು
ಕುರುಡುಮಲೆ ಸೋಮೇಶ್ವರ ದೇವಾಲಯ
*ಟಿ.ಎಂ.ಸತೀಶ್
ಆಂಜನೇಯನ ಪುಣ್ಯಕ್ಷೇತ್ರ
ಮುಳಬಾಗಲಿನಿಂದ ಕೇವಲ 9 ಕಿಲೋ
ಮೀಟರ್ ದೂರದಲ್ಲಿರುವ ಈ
ಪುಟ್ಟ ಗ್ರಾಮ ಚೋಳ ರಾಜರ ಕಾಲದಲ್ಲಿ ಇದು
ಪ್ರಮುಖ ಸ್ಥಳವಾಗಿತ್ತು ಎಂಬುದನ್ನು
ಇಲ್ಲಿರುವ ದೇವಾಲಯಗಳು ಸಾರುತ್ತವೆ.
ಇಲ್ಲಿ ಅತ್ಯಂತ ಪುರಾತನವಾದ ಸೋಮೇಶ್ವರ ದೇವಾಲಯವಿದೆ. ಮುಖಮಂಟಪ, ಸುಕನಾಸಿ, ನವರಂಗ,
ಗರ್ಭಗುಡಿ ಇರುವ ದೇವಾಲಯದ ನವರಂಗದಲ್ಲುವ ಎಂಟು ಮೂಲೆಯ ನಾಲ್ಕು ಕಂಬಗಳ ಮೇಲೂ
ಸುಂದರವಾದ ಶೈವ - ವೈಷ್ಣವ ವಿಗ್ರಹಗಳನ್ನು ಕೆತ್ತಲಾಗಿದೆ.
ಬಲಭಾಗದ ಕಂಬದಲ್ಲಿ ಸಾವು, ಹುತ್ತದ ಜೊತೆ ಸುಬ್ರಹ್ಮಣ್ಯನ ವಿಗ್ರಹ ಕೆತ್ತಲಾಗಿದೆ.
ಗರ್ಭಗೃಹದ ಎದುರು ಇರುವ ಭಿತ್ತಿಯಲ್ಲಿ ರಂಧ್ರವಿದ್ದು, ಈ ರಂಧ್ರದ ಮೂಲಕವೂ ದೇವರ
ದರ್ಶನ ಲಭ್ಯ. ಈ ರಂಧ್ರದಿಂದ ಸೂರ್ಯ ಕಿರಣಗಳು ಹಾದು ದೇವರ ಮೇಲೆ ಬೀಳುತ್ತದೆ ಎಂದೂ
ಪುರೋಹಿತರು ಹೇಳುತ್ತಾರೆ.
ರಸ್ತೆಯಿಂದ ಹದಿನಾಲ್ಕು ಮೆಟ್ಟಿಲೇರಿ ದೇವಾಲಯದ ಪ್ರಾಂಗಣ ಪ್ರವೇಶಿಸುತ್ತಿದ್ದಂತೆ
ದೊಡ್ಡ ಬಯಲು ಗಣಪನ ದರ್ಶನವಾಗುತ್ತದೆ. ಈ ಗಣಪನಿಗೆ ಹಾನಿ ಆಗದಂತೆ ಕಬ್ಬಿಣದ ಗ್ರಿಲ್
ಮಾಡಿಸಿ ಬಂಧಿಸಿಡಲಾಗಿದೆ. ವಿಶಾಲವಾದ ಕಲ್ಲು ಕಟ್ಟಡದ ದೇವಾಲಯದ ಮೇಲ್ಭಾಗದಲ್ಲಿ
ಗೋಪುರ, ಗೋಪುರದ ಸುತ್ತಲೂ ಬಸವನ ಮೂರ್ತಿಗಳು ಗೋಚರಿಸುತ್ತವೆ. ಪ್ರಧಾನ ದೇವಾಲಯ
ಪ್ರವೇಶಿಸಲು ಮಂಟಪ ಪ್ರವೇಶಿಸುತ್ತಿದ್ದಂತೆ ಮಂಟಪದ ಕಂಬಗಳಲ್ಲಿರುವ ಸೂಕ್ಷ್ಮ
ಕಲಾಕೃತಿಗಳು ಗಮನ ಸೆಳೆಯುತ್ತವೆ.
ಶಿವಪಾರ್ವತಿ, ಗಂಗೆ,ಗೌರಿಯರೊಂದಿಗೆ ಇರುವ ಶಿವ, ಮುನಿಗಳು ಇತ್ಯಾದಿ ಹಲವಾರು ದೇವತಾ
ವಿಗ್ರಹಗಳಿವೆ. ದೇವಾಲಯದ ಒಳ ಭಾಗದಲ್ಲಿ ಇರುವ ಕಂಬಗಳಲ್ಲಿ ಸಹ ನೃತ್ಯ ಮಾಡುತ್ತಿರುವ
ಗಣಗಳು, ಶಿವಪುರಾಣದ ಹಲವು ದೃಶ್ಯಾವಳಿಗಳು ಕಲ್ಲಿನಲ್ಲಿ ಕಥೆ ಹೇಳುತ್ತವೆ.
ಗರ್ಭಗೃಹಕ್ಕೆನೇರವಾಗಿರುವ ಬಿತ್ತಿಯಲ್ಲಿ ರಂಧ್ರವಿದ್ದು, ಹೊರಭಾಗದಲ್ಲಿ ಮಂಟಪ
ನಿರ್ಮಿಸಲಾಗಿದೆ. ಇದರಲ್ಲಿ ಬಸವಣ್ಣನ ಸುಂದರ ಮೂರ್ತಿಯಿದೆ.
ಹೊರಭಿತ್ತಿಗಳ ಮೇಲೆ ಸುಂದರ
ಕೆತ್ತನೆ ಇದೆ. ಕಂಬವೊಂದರ ಮೇಲೆ ಸಿಂಹ ಆನೆಯನ್ನು ಕೊಲ್ಲುತ್ತಿರುವ ಶಿಲ್ಪವೂ ಇದೆ.
ಗರ್ಭಗುಡಿಯಲ್ಲಿರುವ ಲಿಂಗ ಸುಂದರವಾಗಿದೆ. ದೇಗುಲ ಪ್ರಾಕಾರದಲ್ಲಿ
ನವಿಲಿನ ಮೇಲೆ ಕುಳಿತ ಷಣ್ಮುಖನ ಸುಂದರ ಹಾಗೂ ಚಿಕ್ಕ ಗುಡಿ ಇದೆ. ಪಾರ್ವತಿ ಮತ್ತು
ಕ್ಷಮಾಂಬಾ ಅಮ್ಮನವರ ಗುಡಿಗಳು ಇವೆ..
ಪುರಾಣ ಪ್ರಸಂಗದ ರೀತ್ಯ ತ್ರಿಪುರಾಸುರ ಸಂಹಾರವಾದ ಬಳಿಕ ದೇವಾನು ದೇವತೆಗಳು ಈ ಗಿರಿಯ ಮೇಲೆ ಕೂಡಿ ಸಂಭ್ರಮ ಪಟ್ಟರಂತೆ. ದೇವತೆಗಳೆಲ್ಲರೂ ಒಂದೇ ಕಡೆ ಕೂಡಿದ ಈ ಬೆಟ್ಟ ಕೂಡು ಮಲೆ ಎಂದು ಖ್ಯಾತವಾಯಿತಂತೆ. ಈ ದೇವಾಲಯಕ್ಕೆ ಸನಿಹದಲ್ಲಿ 3 ಅಡಿ ಪೀಠದ ಮೇಲೆ ಪ್ರತಿಷ್ಠಾಪಿಸಲಾದ 15 ಅಡಿ ಎತ್ತರದ ತುಸು ಹಸಿರು ಬಣ್ಣದ ಸಾಲಿಗ್ರಾಮ ಶಿಲೆಯ ಗಣಪನ ವಿಗ್ರಹವಿರುವ ಪುರಾತನ ದೇವಾಲಯವಿದೆ. |
![]() ![]() |
||