|
ಮುಖಪುಟ
/ನಮ್ಮ
ದೇವಾಲಯಗಳು ಕೂಡಲಿಯ ಬ್ರಹ್ಮೇಶ್ವರಸ್ವಾಮಿ ದೇವಾಲಯ
ಈಗಲೂ ಈ ಮಠ ಕೊಡಲಿ ಶೃಂಗೇರಿ ಮಠವೆಂದೇ ಖ್ಯಾತವಾಗಿದೆ. ಇಲ್ಲಿ ಮಾಧ್ವಮಠವೂ ಇದೆ. ಇಲ್ಲಿ ಬ್ರಹ್ಮೇಶ್ವರ, ರಾಮೇಶ್ವರ ಮತ್ತು ನರಸಿಂಹ ದೇವರ ಆಲಯಗಳಿವೆ. ಇಲ್ಲಿರುವ ಪಾರ್ವತಿ ಬ್ರಹ್ಮೇಶ್ವರ ದೇವಾಲಯ ಅತ್ಯಂತ ಪುರಾತನವಾದದ್ದು. ಸ್ಥಳ ಪುರಾಣದ ರೀತ್ಯ ಸೃಷ್ಟಿಕರ್ತನಾದ ಬ್ರಹ್ಮನು ಪರಶಿವನ ಕೃಪೆಗೆ ಪಾತ್ರನಾಗಲು ನಿರ್ಧರಿಸಿ ಶಿವಪೂಜೆಗಾಗಿ ಪ್ರಶಾಂತ ಸ್ಥಳಕ್ಕೆ ಹುಡುಕಿದಾಗ, ತುಂಗಾ ಮತ್ತು ಭದ್ರಾನದಿಗಳು ಸಂಗಮವಾಗುವ ಈ ಕ್ಷೇತ್ರವೇ ಸೂಕ್ತವೆಂದು, ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ, ನದಿಯಲ್ಲಿ ಮಿಂದು ಒದ್ದೆ ಬಟ್ಟೆಯಲ್ಲೇ ಶಿವನನ್ನು ಪೂಜಿಸಿದನಂತೆ. ಆಶ್ವಯುಜ ಶುಕ್ಲ ಪೌರ್ಣಿಮೆಯ ದಿನ ಶಿವ ಬ್ರಹ್ಮನಿಗೆ ಈ ಸಂಗಮ ಕ್ಷೇತ್ರದಲ್ಲಿ ದರ್ಶನವಿತ್ತು, ಬ್ರಹ್ಮ ಬಯಕೆಯನ್ನು ಈಡೇರಿಸಿದನಂತೆ. ಬ್ರಹ್ಮನಿಂದ ಪೂಜಿಸಲ್ಪಟ್ಟು, ಬ್ರಹ್ಮ ಶಿವನಿಗೆ ಪ್ರತ್ಯಕ್ಷವಾದ ಇಲ್ಲಿ ಬ್ರಹ್ಮೇಶ್ವರನ ದೇವಾಲಯ ನಿರ್ಮಿಸಲಾಗಿದೆ. ಆಶ್ವಯುಜ ಶುಕ್ಲ ಪೌರ್ಣಿಮೆಯ ದಿನ ಇಲ್ಲಿ ಶಿವಪೂಜೆ ಮಾಡುವವರ ಸಕಲ ಅಭಿಷ್ಠಗಳೂ ಈಡೇರುತ್ತವೆ ಎಂಬುದು ಬಲವಾದ ನಂಬಿಕೆ. ಇಲ್ಲಿ ಸೋಮವಾರದಂದು ಅಮಾವಾಸ್ಯೆ ಬಂದಾಗ ವಿಶೇಷ ಪೂಜೆಗಳು ನಡೆಯುತ್ತವೆ. ಅಂದು ಶಿವನನ್ನು ಪೂಜಿಸಿದರೆ ಸಕಲ ಸಿದ್ಧಿ ದೊರಕುತ್ತದಂತೆ. ಇಲ್ಲಿ ಪ್ರತಿ ನಿತ್ಯ ಪೂಜೆ ನಡೆಯುತ್ತದೆ. ಸೋಮವಾರಗಳಂದು, ಮಾಸ ಶಿವರಾತ್ರಿ ಹಾಗೂ ಮಹಾ ಶಿವರಾತ್ರಿಯಂದು ವಿಶೇಷ ಪೂಜಾ ವಿಧಿಗಳು ನಡೆಯುತ್ತವೆ. ಶಿವನು ಬ್ರಹ್ಮನಿಗೆ ದರ್ಶನವಿತ್ತು ಆಶ್ವಯುಜ ಶುಕ್ಲ ಪೌರ್ಣಿಮೆಯಂದು ಉತ್ಸವ ಜರುಗುತ್ತದೆ. ಶಿವಮೊಗ್ಗದಿಂದ ಕೂಡಲಿಗೆ ಹೋಗಲು ನೇರ ಬಸ್ ಸೌಲಭ್ಯವಿದೆ. | |||