|
ಕೋಲಾರಮ್ಮ ದೇವಾಲಯ *ಟಿ.ಎಂ.ಸತೀಶ್
ದತ್ತಾತ್ರೇಯರ ಪರಮ ಭಕ್ತನಾದ ಕಾರ್ತವೀಯಾರ್ಜುನ ಹಿಂದೆ ಈ ಪ್ರದೇಶದಲ್ಲಿ ದೊರೆಯಾಗಿದ್ದನಂತೆ. ಒಮ್ಮೆ ಆತ ಜಮದಗ್ನಿ ಮಹರ್ಷಿಗಳ ಆಶ್ರಮಕ್ಕೆ ಪರಿವಾರ ಸಮೇತನಾಗಿ ಹೋದ. ಜಮಗದ್ನಿ ಋಷಿ ತನಗೆ ಇಂದ್ರ ಪ್ರಸಾದಿಸಿದ್ದ ಬೇಡಿದ್ದನ್ನು ಕರುಣಿಸುವ ಸುರಭಿ ಎಂಬ ಸುರಧೇನುವಿನ ಸಹಾಯದಿಂದ ರಾಜ ಪರಿವಾರಕ್ಕೆ ರಾಜಾತಿತ್ಯವನ್ನೇ ನೀಡಿದೆ. ಕಾಡಿನಲ್ಲಿ, ಅದೂ ಮುನ್ಸೂಚನೆ ಇಲ್ಲದೆ ಅಭ್ಯಾಗತನಾಗಿ ಆಗಮಿಸಿದ, ತನಗೂ, ತನ್ನ ಪರಿವಾರಕ್ಕೂ ಉಚಿತ ಸತ್ಕಾರ ಮಾಡಿದ ಇಂಥ ಅಪರೂಪದ ಸುರಧೇನು ರಾಜನ ಬಳಿ ಇರಬೇಕು ಇದನ್ನು ತನಗೆ ನೀಡು ಎಂದು ಕಾರ್ತವೀರ್ಯ ಜಮದಗ್ನಿಯನ್ನು ಪೀಡಿಸಿದ. ಜಮದಗ್ನಿ ಹಸುವನ್ನು ಕೊಡಲು ನಿರಾಕರಿಸಿದಾಗ, ಜಮದಗ್ನಿಯ ಮೇಲೆ ಬಾಣಗಳ ಮಳೆಗರೆದನಂತೆ. ಜಮದಗ್ನಿಯ ಪತ್ನಿ ರೇಣುಕಾ ಪತಿಯ ಚಿತೆ ಏರಿ ಸತಿಯಾದಳು.
ಪತಿಯ ಚಿತೆ ಏರಿದ ರೇಣುಕಾ ಮಾತೆಗೆ ರಾಜೇಂದ್ರ ಚೋಳ ದೇವಾಲಯ ಕಟ್ಟಿದನೆಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಮೂರನೇ ಶತಮಾನದ ಆದಿ ಭಾಗದಲ್ಲಿ ಕೋಲಾರ ಅಥವಾ ಕೋವಲಾಲಪುರವು ಗಂಗರ ಅಧೀನದಲ್ಲಿತ್ತು. ಇಕ್ಷ್ವಾಕು ವಂಶಸ್ಥರೆಂದು ಹೇಳಲಾಗುವ ದಡಿಗ ಮತ್ತು ಮಾಧವ ಸಹೋದರರು ಗಂಗರಾಜ್ಯವನ್ನು ಸ್ಥಾಪಿಸಿ ಕೋಲಾಹಲಪುರವನ್ನು ನೂರು ವರ್ಷಕಾಲ ತಮ್ಮ ರಾಜಧಾನಿಯಾಗಿ ಮಾಡಿಕೊಂಡಿದ್ದರು. ಆಗ ಈ ಊರಿಗೆ ಕುವಲಾಲಪುರವೆಂಬ ಹೆಸರು ಬಂತು. ನಂತರ ಇದುವೇ ಕೋಲಾರವಾಯ್ತು. ಇಂತರ ಕೋಲಾರ ಚೋಳ, ಹೊಯ್ಸಳ, ವಿಜಯನಗರದರಸರು, ಷಾಜಿ ದೊರೆಗಳು, ಮೊಗಲ ಚಕ್ರವರ್ತಿಗಳ, ಹೈದರಲಿ ಆಳ್ವಿಕೆಗೂ ಒಳಪಟ್ಟಿತ್ತು. 1791ರಲ್ಲಿ ಕೋಲಾರ ಮೈಸೂರು ರಾಜ್ಯದ ಭಾಗವಾಯ್ತು.
ಇಲ್ಲಿ
ಗಂಗರ ಕಾಲದಲ್ಲೇ ನಿರ್ಮಾಣವಾಗಿ, ಚೋಳರ ಕಾಲದಲ್ಲಿ ಜೀರ್ಣೋದ್ಧಾರಗೊಂಡ ಕೋಲಾರಮ್ಮ
ದೇವಾಲಯ ವಾಸ್ತು ವೈಭವದಿಂದ ಕೂಡಿದೆ. ಪ್ರಧಾನ ದೇವಾಲಯ ಪೂರ್ವಾಭಿಮುಖವಾಗಿದೆ.
ದೇವಾಲಯದ ವಿಸ್ತಾರವಾದ ಮಂಟಪವು
ಗರ್ಭಗೃಹದಲ್ಲಿ ಸಪ್ತಮಾತೃಕೆಯರ
ಮತ್ತು ಅಷ್ಟಭುಜಗಳ ಮಹಿಷಾಸುರಮರ್ದಿನಿಯ ರೂಪದಲ್ಲಿರುವ ಕೋಲಾರಮ್ಮ ತಾಯಿ
ವಿಗ್ರಹವಿದೆ. ಇದರ ಬಲಭಾಗದಲ್ಲಿರುವ ಗುಡಿಯಲ್ಲಿ ಸಪ್ತಮಾತೃಕೆಯರ ಮೂರ್ತಿಗಳಿವೆ.
ದೇವಿಯ ಮೇಲೆ ವೃಶ್ಚಿಕ ಶಿಲ್ಪವಿದೆ.
ಬೆಂಗಳೂರಿನಿಂದ ಕೋಲಾರಕ್ಕೆ ನೇರ ಬಸ್ ಸೌಕರ್ಯವಿದೆ. ರಸ್ತೆಯೂ ಉತ್ತಮವಾಗಿದೆ. ಜಿಲ್ಲಾ ಕೇಂದ್ರವಾದ ಕೋಲಾರದಲ್ಲಿ ಉಳಿಯಲು ಹೋಟೆಲ್ ವ್ಯವಸ್ಥೆ ಇದೆ. ಕೋಲಾರ ಸುತ್ತಮುತ್ತ ನೋಡ ಬೇಕಾದ ಸ್ಥಳಗಳು - ಅಂತರಗಂಗೆ, ಕುರುಡುಮಲೆ, ಮಾರ್ಕಂಡೇಶ್ವರ ಬೆಟ್ಟ, ಆವನಿ, ಮುಳಬಾಗಿಲು, ಚಿಕ್ಕತಿರುಪತಿ, ಬಂಗಾರತಿರುಪತಿ, ಕೋಟಿಲಿಂಗೇಶ್ವರ. | |||