|
ಹನುಮಂತನಗರ ಕುಮಾರಸ್ವಾಮಿ ದೇವಾಲಯ *ಟಿ.ಎಂ.ಸತೀಶ್
ಹನುಮಂತನಗರದ ಎತ್ತರವಾದ ಬೆಟ್ಟದ ಮೇಲೆ ಈಗಿರುವ ಭವ್ಯ ದೇವಾಲಯದ ಜಾಗದಲ್ಲಿ ಹಿಂದೆ ಮಾಗಡಿ ಕೆಂಪೇಗೌಡರು ಶಿವಲಿಂಗವೊಂದನ್ನು ಪ್ರತಿಷ್ಠಾಪಿಸಿ, ಪುಟ್ಟದೊಂದು ಮಂಟಪ ಕಟ್ಟಿಸಿದ್ದರಂತೆ. ನಂತರದ ದಿನಗಳಲ್ಲಿ ನರಹರಿರಾಯರು ಲಿಂಗದ ಮುಂಭಾಗದಲ್ಲಿ ಮಂಟಪ ಹಾಗೂ ಗೋಪುರ ಕಟ್ಟಿಸಿದರಂತೆ. ಹೀಗಾಗೇ ಈ ಗುಡ್ಡಕ್ಕೆ ನರಹರಿರಾಯರ ಗುಡ್ಡ ಎಂಬ ಹೆಸರು ಬಂದಿದೆ. ಈ ದೇವಾಲಯಕ್ಕೆ ಮೈಸೂರು ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇನಾಂ ಜಮೀನು ನೀಡಿ ಅಭಿವೃದ್ಧಿ ಪಡಿಸಿದರು.
ದೇವಾಲಯದ ಗೋಪುರ ರಮಣೀಯವಾಗಿದೆ. ದೇವಾಲಯದ ಗರ್ಭಗೃಹದಲ್ಲಿ ಸುಂದರವಾದ ಕುಮಾರಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. 1956ರ ಆಷಾಡ ಮಾಸದಲ್ಲಿ ಸುಬ್ರಹ್ಮಣ್ಯನ ಜನ್ಮನಕ್ಷತ್ರವಾದ ಕೃತ್ತಿಕೆ ನಕ್ಷತ್ರವಿದ್ದಾಗಲೇ ಈ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಪಕ್ಕದಲ್ಲಿ ಶಿವಲಿಂಗ ಹಾಗೂ ಪಾರ್ವತಿ ಅಮ್ಮನವರ ಗುಡಿ, ಗಾಯತ್ರಿಯೂ ಇದೆ. ಪಕ್ಕದಲ್ಲೇ ಗಣಪತಿಯ ದೇವಾಲಯ ಹಾಗೂ ನವಗ್ರಹಗಳ ಗುಡಿ ಇದೆ. ಬೆಳ್ಳಿಯ ಕವಚದ ಅಲಂಕಾರದಲ್ಲಿ ವಿಗ್ರಹಗಳ ಸೊಬಗು ನೂರ್ಮಡಿಗೊಳ್ಳುತ್ತದೆ.
ಮೆಟ್ಟಿಲುಗಳನ್ನು ಏರುವ ಮೊದಲೇ ಪಂಚಮುಖ ವಿನಾಯಕನ ದರ್ಶನವಾಗುತ್ತದೆ. ದೇವಾಲಯದ ಎದುರು ಅಶ್ವತ್ಥಕಟ್ಟೆ ಹಾಗೂ ಆಂಜನೇಯನ ದೇವಸ್ಥಾನವಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||