ಮುಖಪುಟ /ನಮ್ಮ ದೇವಾಲಯಗಳು  

ಯೋಗನರಸಿಂಹ, ತ್ರಿಕೂಟೇಶ್ವರ ನೆಲೆಸಿಹ ಗೊರೂರು

Goruru  Yoganarasimhaಪ್ರಕೃತಿ ಸೌಂದರ್ಯದ ಮಲೆನಾಡಿನ ಸೆರಗಲ್ಲೇ ಮುಂದುವರಿದಿರುವ ಹಾಸನ ಜಿಲ್ಲೆ ಶಿಲ್ಪ ಕಲೆಗಳ ತವರು. ಬೇಲೂರು, ಹಳೆಬೀಡು, ಶ್ರವಣಬೆಳಗೊಳದಂತಹ ಕಲಾ ಶ್ರೀಮಂತಿಕೆಯ ನಾಡುಗಳ ನೆಲೆವೀಡಾದ ಹಾಸನ ಜಿಲ್ಲೆ ಪವಿತ್ರ ಪುಣ್ಯಕ್ಷೇತ್ರಗಳ ತವರೂ ಹೌದು. ಇಂಥ ಪವಿತ್ರ ತಾಣಗಳಲ್ಲಿ ಗೊರೂರು ಒಂದು.

ಹಾಸನ ಜಿಲ್ಲೆ ಅರಕಲಗೂಡಿನಿಂದ 8 ಕಿ.ಮೀಟರ್ ದೂರದಲ್ಲಿ ಹೇಮಾವತಿ ದಂಡೆಯ ಮೇಲೆ ಇರುವ ಗೊರೂರು ಯೋಗಾನರಸಿಂಹ ಸ್ವಾಮಿಯ ನೆಲೆವೀಡು. ಸಾಹಿತಿ ರಾಮಸ್ವಾಮಿ ಅಯ್ಯಂಗಾರ್ ಅವರ ಹುಟ್ಟೂರೂ ಆದ ಇದು ಸಾಹಿತ್ಯದ ಕರುನಾಡು. ಹಿಂದೆ ಗೂರವೂರು, ವಿಜಯಾದಿತ್ಯಪುರ ಎಂದು ಕರೆಯಲ್ಪಡುತ್ತಿದ್ದ ಈ ಊರಿನಲ್ಲಿ ಅತ್ಯಂತ ಸುಂದರ ಹಾಗೂ ಪ್ರಾಚೀನವಾದ ತ್ರಿಕೂಟಲಿಂಗ ದೇವಾಲಯವಿದೆ. ಇದನ್ನು ವಿಜಯಾದಿತ್ಯ ಹೆಗ್ಗಡೆ ನಿರ್ಮಿಸಿದನೆಂದು ಶಾಸನಗಳು ತಿಳಿಸುತ್ತದೆ. ಇಲ್ಲಿರುವ  ದೇವಾಲಯ ಸುಂದರ ಶಿಲ್ಪಕಲಾವೈಭವದಿಂದ ಕೂಡಿದೆ. ೧೫೮೬ರಲ್ಲಿ ಈ ದೇವಾಲಯ ನಿರ್ಮಾಣವಾಗಿದೆ.

Goruru Temple, gorur narasimhaswamy, ಗೊರೂರು ನರಸಿಂಹಸ್ವಾಮಿ ದೇವಾಲಯಮುಂಭಾಗದ ಗೊಪುರ ಹೊಯ್ಸಳರ ಶಿಲ್ಪಕಲೆಯಿಂದ ಸಮೃದ್ಧವಾಗಿದೆ. ಸಮೀಪದಲ್ಲೇ ಕೈಲಾಸೇಶ್ವರ ದೇಗುಲವೂ ಇದೆ. ಪ್ರಶಾಂತವಾಗಿ ಹರಿವ ಹೇಮಾವತಿ ನದಿ ದಂಡೆಯಲ್ಲಿ ಮೆಟ್ಟಿಲುಗಳಿಂದ ಕೂಡಿದ ಸುಂದರವಾದ ಸ್ನಾನಘಟ್ಟವಿದೆ.

ಹೊಳೆಯ ಪಕ್ಕದಲ್ಲೇ ಇಲ್ಲಿರುವ ಯೋಗಾನರಸಿಂಹ ಸ್ವಾಮಿ ದೇವಾಲಯದ ಗರ್ಭಗುಡಿಯಲ್ಲಿ ಒಂದೂವರೆ ಅಡಿಯಷ್ಟು ಎತ್ತರದ ಸುಂದರ ಶಿಲ್ಪಕಲಾ ಪೀಠದ ಮೇಲೆ ಹೊಯ್ಸಳರ ಕಾಲದ ಮನಮೋಹಕವಾದ ಆರು ಅಡಿ ಎತ್ತರದ ಯೋಗಾನರಸಿಂಹ ಸ್ವಾಮಿಯ ಸುಂದರ ವಿಗ್ರಹ ಪ್ರತಿಷ್ಠಾಪಿಸಲಾಗಿದೆ.

ನಿತ್ಯ ಪೂಜೆ ಇಲ್ಲಿ ನಡೆಯುತ್ತದೆ. ಅಲಂಕಾರಗೊಂಡ ಯೋಗಾನರಸಿಂಹ ಸ್ವಾಮಿಯನ್ನು ನೋಡುವುದೇ ಒಂದು ಸೊಬಗು. ಹಾಸನದಿಂದ ೨೩ ಕಿ.ಮೀಟರ್ ದೂರದಲ್ಲಿರುವ ಗೊರೂರಿಗೆ ಸಾಕಷ್ಟು ಬಸ್ ಸೌಕರ್ಯವಿದೆ.. ಅತಿ ಸಮೀಪದಲ್ಲೇ ೧೯೭೭ರಲ್ಲಿ ನಿರ್ಮಿಸಲಾದ ಗೊರೂರು ಡ್ಯಾಮ್ ಕೂಡ ಇದೆ. 

ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಮುಖಪುಟ /ನಮ್ಮ ದೇವಾಲಯಗಳು