|
ಮುಖಪುಟ
/ನಮ್ಮ
ದೇವಾಲಯಗಳು ಗದಗಿನ ವೀರನಾರಾಯಣ ದೇವಾಲಯ
ವಿಜಯನಗರ ಅರಸರ ಕಾಲದಿಂದ ಗದುಗು ಎಂದೇ ಕ್ಯಾತವಾಗಿದ್ದ ಇಲ್ಲಿ ಹೊಯ್ಸಳರ ಅರಸು ಬಿಟ್ಟಿದೇವ ಕಟ್ಟಿಸಿದ ಶ್ರೀ ವೀರನಾರಾಯಣ ದೇವಾಲಯವಿದೆ. ರಾಮಾನುಜಾಚಾರ್ಯರಿಂದ ವೈಷ್ಣವನಾದ ಬಿಟ್ಟಿದೇವ ತನ್ನ ಗುರುಗಳ ಆಣತಿಯಂತೆ ಕಟ್ಟಿಸಿದ ಐದು ವಿಷ್ಣು ದೇವಾಲಯಗಳ ಪೈಕಿ ಇದೊ ಒಂದು. ವೀರನಾರಾಯಣ ದೇವಾಲಯ ಹೊಯ್ಸಳ, ಚಾಲುಕ್ಯ ಮತ್ತು ವಿಜಯನಗರದರಸರ ಕಾಲದ ವಾಸ್ತುಶೈಲಿಯನ್ನು ಒಳಗೊಂಡಿದೆ. ಪ್ರವೇಶದ್ವಾರ ವಿಜಯನಗರ ಶೈಲಿಯಲ್ಲಿದ್ದರೆ, ಗರ್ಭಗೃಹ ಹಾಗೂ ಮೇಲ್ಗೋಪುರ ಚಾಲುಕ್ಯರ ಶೈಲಿಯಲ್ಲಿದೆ. ದೇವಾಲಯದ ಮುಂದಿರುವ ಗರುಡಗಂಬ ಹಾಗೂ ರಂಗಮಂಟಪಗಳು ಹೊಯ್ಸಳ ಶೈಲಿಯಲ್ಲಿವೆ. ಪೂರ್ವಾಭಿಮುಖವಾಗಿರುವ ದೇವಾಲಯ ಪ್ರವೇಶಿಸಿದರೆ ಒಳಗಿರುವ ಸುಂದರ ದೇವಾಲಯಗಳ ಆಧಾರ ಸ್ತಂಭಗಳ ಸೂಕ್ಷ್ಮ ಕೆತ್ತನೆ ಮನಸೆಳೆಯುತ್ತದೆ. ಗದುಗಿನ ನಾರಣಪ್ಪ (ಕುಮಾರವ್ಯಾಸ) ಈ ದೇವಾಲಯದಲ್ಲಿ ಕುಳಿತು ಗದುಗಿನ ಭಾರತ ಬರೆದನೆಂದೂ ಹೇಳುತ್ತಾರೆ. ದೇವಾಲಯದ ಕೆಲವು ಕಲ್ಲುಗಳಲ್ಲಿ ಓಲೆಗರಿಯ ಮೇಲೆ ಬರೆಯಲು ಬಳಸುತ್ತಿದ್ದ ಲೋಹದ ಲೇಖನಿಯನ್ನು ಹರಿತ ಮಾಡಿದ ಕುರುಹುಗಳೂ ಇವೆ. ಗರ್ಭಗೃಹದಲ್ಲಿ ತುಸು ನೀಲಿ ಮಿಶ್ರಿತ ಕಪ್ಪುಶಿಲೆಯಲ್ಲಿ ಸುಂದರವಾಗಿ ಕಡೆಯಲಾಗಿರುವ ವೀರನಾರಾಯಣನ ನಿಂತಿರುವ ಭಂಗಿಯ ಮೂರ್ತಿಯಿದೆ. ಈ ವಿಗ್ರಹದಲ್ಲಿ ಸೂಕ್ಷ್ಮ ಶಿಲ್ಪಕಲೆಯಿಂದ ಕೂಡಿದ ಪ್ರಭಾವಳಿಯಿದ್ದು ಮೇಲ್ಭಾಗದಲ್ಲಿ ಸಿಂಹಮುಖವಿದೆ. ದೇವಾಲಯ ಪ್ರಾಕಾರದಲ್ಲಿ ಲಕ್ಷ್ಮೀನರಸಿಂಹ, ಸರ್ಪೇಶ್ವರ ಇತ್ಯಾದಿ ದೇವಾಲಯಗಳಿವೆ.
ಗದಗಿನಲ್ಲಿ ಅನೇಕ ದೇವಸ್ಥಾನಗಳಿದ್ದು, ಮೂರು ಲಿಂಗಗಳಿರುವ ತ್ರಿಕೂಟೇಶ್ವರ ದೇವಸ್ಥಾನವೂ ಪ್ರಮುಖವಾದುದಾಗಿದೆ. ಇದರ ಮಹಾದ್ವಾರ ಭವ್ಯವಾಗಿದೆ. ಗರ್ಭಗುಡಿಯ ಸುತ್ತ ಸುಂದರ ಶಿಲ್ಪಗಳಿವೆ. ಊರ ಮಧ್ಯದಲ್ಲಿರುವ ಸೋಮೇಶ್ವರ ದೇವಸ್ಥಾನ ಮನಮೋಹಕವಾಗಿದೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||