|
ಬಸವನಗುಡಿಯ ದೊಡ್ಡ ಗಣೇಶ
ಬಸವನಗುಡಿ ಬೆಂಗಳೂರಿನ ಅತಿ ಪ್ರತಿಷ್ಠಿತ ಹಾಗೂ ಹಳೆಯ ಬಡಾವಣೆ. ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆವೀಡೂ ಹೌದು. ಇಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು. ಕಹಳೆ ಬಂಡೆ ಅಥವಾ ಬ್ಯೂಗಲ್ ರಾಕ್ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ಸುಂದರ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಸುಂದರವಾದ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂಭು, ಉದ್ಭವ ಗಣಪ ಎಂತಲೂ ಹೇಳುತ್ತಾರೆ. ಸುಮಾರು 450 ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಯಲಹಂಕ ಭೂಪಾಲ ಒಂದನೇ ಕೆಂಪೇಗೌಡರು ಕಟ್ಟಿಸಿದರೆಂದು ಇತಿಹಾಸ ಸಾರುತ್ತದೆ. ಕೆಲವೇ ದಶಕಗಳ ಹಿಂದೆ ಅಂದರೆ 1973ಕ್ಕೆ ಮೊದಲು ಇಲ್ಲಿ ಗಣೇಶನಿಗೆ ಪುಟ್ಟದೊಂದು ಗುಡಿ ಇತ್ತು. ಹೆಂಚಿನ ಛಾವಣಿಯಡಿ ಗಣಪ ಪೂಜೆಗೊಳ್ಳುತ್ತಿದ್ದ. 1973ರಲ್ಲಿ ಸಮಾಜ ಸೇವಕರಾದ ಎಸ್.ಎಂ. ಕೃಷ್ಣಪ್ಪನವರು ದೇವಾಲಯಕ್ಕೆ ಆವರಣ ಕಟ್ಟಿಸಿದರು. ನಂತರದ ದಿನಗಳಲ್ಲಿ ಲೋಕಸಭಾ ಸದಸ್ಯರಾಗಿದ್ದ ಟಿ.ಆರ್. ಶಾಮಣ್ಣ, ವಿ.ಎಸ್. ಕೃಷ್ಣಯ್ಯರ್ ಮೊದಲಾದವರು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, ಸರ್ಕಾರದ ನೆರವೂ ಪಡೆದು ಈಗಿರುವ ರಾಜಗೋಪುರ ಮತ್ತು ಮಹಾದ್ವಾರ ನಿರ್ಮಾಣಕ್ಕೆ ಚಾಲನೆ ನೀಡಿದರು. 1988ರಲ್ಲಿ ಈ ಕಾರ್ಯ ಪೂರ್ಣಗೊಂಡು ಈಗಿರುವ ಸುಂದರ ದೇವಾಲಯ ರೂಪುಗೊಂಡಿತು.
ಗಣಪತಿಗೆ ತರಕಾರಿಗಳಿಂದ ಶಾಖಾಂಬರಿ ಅಲಂಕಾರ, ಹರಿಶಿನ, ಕುಂಕುಮದ ಅಲಂಕಾರ, ಫಲಪುಷ್ಪ ಅಲಂಕಾರ, ನಿಂಬೇಹಣ್ಣಿನ ಅಲಂಕಾರ, ಕಡುಬಿನ ಅಲಂಕಾರ ಹೀಗೆ ಹಲವು ಬಗೆಯ ಅಲಂಕಾರ ಮಾಡಲಾಗುತ್ತದೆ. ಆದರೆ ದೊಡ್ಡ ಗಣಪನ ಚೆಲುವು ಬೆಣ್ಣೆ ಅಲಂಕಾರದಲ್ಲಿ ನೂರ್ಮಡಿಗೊಳ್ಳುತ್ತದೆ. ಏನು ಇಷ್ಟು ದೊಡ್ಡ ಗಣಪನಿಗೆ ಬೆಣ್ಣೆ ಅಲಂಕಾರವೇ ಎಂದು ಹುಬ್ಬೇರಿಸಬೇಡಿ. ಈ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲು ಸರಿಯಾಗಿ ಒಂದು ಟನ್ ಬೆಣ್ಣೆ ಬೇಕು. ಗಣಪನಿಗೆ ಬೆಣ್ಣೆ ಅಲಂಕಾರ ಮಾಡುವುದರಲ್ಲಿ ಸಿದ್ಧಹಸ್ತರಾಗಿರುವ ಇಲ್ಲಿನ ಅರ್ಚಕರು ಪ್ರತಿ ಬಾರಿಯೂ ಒಂದೊಂದು ರೀತಿಯಲ್ಲಿ ಬೆಣ್ಣೆ ಅಲಂಕಾರ ಮಾಡುತ್ತಾರೆ. ವೈವಿಧ್ಯತೆಯ ಇಲ್ಲಿನ ವಿಶೇಷ. ಬಣ್ಣ ಬಣ್ಣದ ಚಿನ್ನಾರಿ ಕಾಗದಗಳಿಂದ ಅಲಂಕರಿಸುತ್ತಾರೆ. ಈ ಗಣಪನಿಗೆ ಬೆಣ್ಣೆ ಅಲಂಕಾರ ಮಾಡಲು ಸುಮಾರು 10 ಗಂಟೆ ಬೇಕೇ ಬೇಕು. ಹಲವು ಭಕ್ತರು ನೀಡುವ ಸೇವೆಯ ಕಾಣಿಕೆಯಿಂದ ಇಲ್ಲಿ ಆಗಿದ್ದಾಗ್ಗೆ ಬೆಣ್ಣೆ ಅಲಂಕಾರ ಮಾಡಲಾಗುತ್ತದೆ. ಈ ಮಹಿಮಾನ್ವಿತ ಗಣಪ :ಗಣಪನ ಮಹಿಮೆ ಅಪಾರವಾದದ್ದು. ಪರೀಕ್ಷಾ ಸಮಯ ಬಂದರಂತೂ ವಿದ್ಯಾರ್ಥಿಗಳು ತಮ್ಮ ಪ್ರವೇಶಪತ್ರಗಳೊಂದಿಗೆ ಗುಡಿಗೆ ಬಂದು, ದೇವರ ಪಾದದ ಬಳಿ ಇಟ್ಟು, ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಮಾಡೆಂದು ಪ್ರಾರ್ಥಿಸುತ್ತಾರೆ. ಹೊಸದಾಗಿ ವಾಹನ ಕೊಂಡವರು ಇಲ್ಲಿ ಬಂದು ಪೂಜೆ ಮಾಡಿಸುವ ದೃಶ್ಯ ಸರ್ವೇಸಾಮಾನ್ಯ. ದೊಡ್ಡ ಗಣೇಶನ ಕೃಪೆ ಇದ್ದರೆ ಎಂಥ ಕಷ್ಟವಾದ ಕೆಲಸವೂ ಹೂ ಎತ್ತಿದಂತೆ ನಡೆಯುತ್ತದೆ ಎಂಬುದು ಭಕ್ತರ ನಂಬಿಕೆ. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈ ದೇವಾಲಯವನ್ನು ತನ್ನ ಬೆಂಗಳೂರು ದರ್ಶನ ಪಟ್ಟಿಯಲ್ಲಿ ಸೇರಿಸಿದೆ. ನಿತ್ಯವೂ ಇಲ್ಲಿಗೆ ನೂರಾರು ಭಕ್ತರು ಬಂದು ಗಣಪನ ಕೃಪೆಗೆ ಪಾತ್ರರಾಗುತ್ತಾರೆ. ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in | |||