|
ಮುಖಪುಟ
/ನಮ್ಮದೇವಾಲಯಗಳು
ಮಲ್ಲೇಶ್ವರದ ದಕ್ಷಿಣಮುಖ ನಂದಿ
ಕಲ್ಯಾಣಿ
*ಟಿ.ಎಂ.ಸತೀಶ್

ಬೆಂಗಳೂರಿನ ಪ್ರಮುಖ ಬಡಾವಣೆ ಮಲ್ಲೇಶ್ವರದಲ್ಲಿ ಕಾಡುಮಲ್ಲೇಶ್ವರ ದೇವಾಲಯದ ಬಳಿ
ಇರುವ ಮತ್ತೊಂದು
ಪುಣ್ಯಕ್ಷೇತ್ರವೇ
ದಕ್ಷಿಣಾಭಿಮುಖ ನಂದಿ.
ಭೂಮಿಯಿಂದ ತಗ್ಗು ಪ್ರದೇಶದಲ್ಲಿರುವ ಈ ದೇವಾಲಯ ಹಲವು ವಿಸ್ಮಯಗಳ ತಾಣ.
ಇಲ್ಲಿ
ನುಣುಪಾದ ಕಪ್ಪುಕಲ್ಲಿನ ಸುಂದರ ನಂದಿಯ ವಿಗ್ರಹವಿದ್ದು, ನಂದಿಯ ಬಾಯಿಂದ ವರ್ಷದ
365ದಿನವೂ ದಿನದ ಎಲ್ಲ 24 ಗಂಟೆಯೂ ನಿರಂತರವಾಗಿ ಧಾರೆ ಧಾರೆಯಾಗಿ ನೀರು
ಹರಿಯುತ್ತದೆ. ಹೀಗೆ ನಂದಿಯ ಬಾಯಿಂದ ಬರುವ ತೀರ್ಥ ಅಲ್ಲಿರುವ ರಂಧ್ರದ ಮೂಲಕ ಹಾದು
ಕೆಳಗಿನ ಘಟ್ಟದಲ್ಲಿರುವ ಶಿವಲಿಂಗದ ಮೇಲೆ ಬೀಳುತ್ತದೆ. ಈ ವಿಸ್ಮಯ ಕಾಣಲು ನಿತ್ಯವೂ
ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಈ
ದೇವಾಲಯ ನೋಡಿದ ಯಾರಿಗಾದರೂ ಇದು ನೂರಾರು ವರ್ಷಗಳ ಹಿಂದಿನ ಪುರಾತನ ದೇವಾಲಯ ಎಂಬುದು
ವೇದ್ಯವಾಗುತ್ತದೆ. ಆದರೆ, ಈ ದೇವಾಲಯ ಇಲ್ಲಿರುವ ವಿಚಾರ ತಿಳಿದದ್ದು ಕೇವಲ 13
ವರ್ಷಗಳ ಹಿಂದಷ್ಟೇ.
ಹಲವು ದಶಕಗಳ ಹಿಂದೆಯೇ ಈ
ದೇವಾಲಯವನ್ನು ಮಣ್ಣಿನಲ್ಲಿ ಮುಚ್ಚಿದ್ದರು, ಯಾವ ಕಾರಣಕ್ಕಾಗಿ ಮುಚ್ಚಿದ್ದರು ಎಂಬುದು
ಮಾತ್ರ ಯಾರಿಗೂ ತಿಳಿದಿಲ್ಲ. ಇದಕ್ಕೆ ಈವರೆಗೆ ಉತ್ತರವೂ ಸಿಕ್ಕಿಲ್ಲ.
ಈಗ್ಗೆ
ಒಂದೂವರೆ ದಶಕದ ಹಿಂದೆ ಈಗ ದಕ್ಷಿಣಮುಖ ನಂದಿ ಕಲ್ಯಾಣಿ ಇರುವ ಜಾಗದಲ್ಲಿ ಬಾಳೆಯ
ತೋಟವಿತ್ತು. ತೆಂಗಿನ ಮರಗಳಿದ್ದವು. ಈ ಜಾಗದಲ್ಲಿ ವಾಣಿಜ್ಯ ಸಮುಚ್ಚಯ ನಿರ್ಮಿಸಲು
ಖಾಸಗಿಯವರು ಮುಂದಾದರು. ತಳಪಾಯಕ್ಕಾಗಿ ಅಗೆಯುವಾಗ ಕಲ್ಲಿನ ಕಟ್ಟಡಗಳು ಗೋಚರಿಸಿದವು.
ಇಲ್ಲೊಂದು ದೇವಾಲಯ ಇರುವ ಸುಳಿವು ದೊರೆಯಿತು. ಇದನ್ನು ಕಂಡ ಸ್ಥಳೀಯರು
ಬಿ.ಕೆ. ಹರಿಪ್ರಸಾದ್ ಹಾಗೂ ಬಿ.ಕೆ. ಶಿವರಾಂ ಅವರ ಬೆಂಬಲ ಮಾರ್ಗದರ್ಶನದಲ್ಲಿ ಬಹಳ
ಜಾಗರೂಕತೆಯಿಂದ ಅಲ್ಲಿದ್ದ ಮಣ್ಣು ಕಲ್ಲು ತೆಗೆಸಿದಾಗ ನಂದಿಯ ಕೊಂಬು ಕಾಣಿಸಿತು.
ಮತ್ತೆ ಆಗೆದು ಶುಚಿಗೊಳಿಸಿದಾಗ ನಂದಿಯ ಬಾಯಲ್ಲಿ ನೀರು ಬರುತ್ತಿರುವುದನ್ನು ನೋಡಿ
ಎಲ್ಲರೂ
ವಿಸ್ಮಯಗೊಂಡರು.
ಮತ್ತಷ್ಟು ಅಗೆದಾಗ ಎರಡನೇ ಹಂತದಲ್ಲಿ ಶಿವಲಿಂಗ ಹಾಗೂ ಕೆಳಗೆ ಹಲವು ಸೋಪಾನಗಳು
ಪುರಾತನ ಕಲ್ಯಾಣಿಯೂ ಗೋಚರಿಸಿತು. ಈ
ವಿಸ್ಮಯ ನೋಡಲು ಸಾವಿರಾರು ಭಕ್ತರು ಆಗಮಿಸಿದರು.
(ಎಲ್ಲ ಶಿವದೇವಾಲಯಗಳಲ್ಲಿ ಲಿಂಗದ ಎದುರು ನಂದಿ ಇದ್ದರೆ ಇಲ್ಲಿ ಶಿವಲಿಂಗದ ಮೇಲೆ
ನಂದಿ ಇರುವುದು ಮತ್ತೊಂದು ವಿಸ್ಮಯ.)
ನಂದಿಯ ಬಾಯಲ್ಲಿ ನೀರು ಬರುವ
ವಿಸ್ಮಯದ ಹಿಂದೆ ತಂತ್ರವಿರಬೇಕೆಂದು
ಹಲವರು ಪರೀಕ್ಷಿಸಿದರು. ನಂದಿಯ ಬಾಯಿಗೆ ಯಾವುದೇ
ಕೊಳವೆ ಅಳವಡಿಸಿಲ್ಲ. ಯಾರೂ ನೀರನ್ನು ಪಂಪ್ ಮಾಡುತ್ತಿಲ್ಲ ಎಂಬುದನ್ನು ಖಾತ್ರಿ
ಪಡಿಸಿಕೊಂಡು ಶಿವನಿಗೆ ನಮಸ್ಕರಿಸಿ
ಬಂದದಾರಿಗೆ ಸುಂಕವಿಲ್ಲವೆಂದು ಹೋದರು.
ಐತಿಹ್ಯ:
ಸ್ಥಳ ಪುರಾಣದ ರೀತ್ಯ ಗೌತಮ ಮಹರ್ಷಿಗಳ ಕೋರಿಕೆಯ ಮೇರೆಗೆ ವಾಯವ್ಯದಿಕ್ಕಿಗೆ
ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ವೃಷಭಾವತಿ ಇಲ್ಲಿ ಬಸವನ ಬಾಯಿಂದ
ಆವಿರ್ಭವಿಸಿದಳಂತೆ.
ಇಲ್ಲಿ
ಸಹಜವಾಗಿ ನಂದಿಯ ಬಾಯಿಂದ ಹರಿಯುವ ಶುದ್ಧ ನೀರು ಖನಿಜಯುಕ್ತವಾಗಿದ್ದು, ಹಲವು ರೋಗಗಳ
ನಿವಾರಕ ಎಂದೇ ಖ್ಯಾತವಾಗಿದೆ.ಪ್ರತಿ
ಸೋಮವಾರ ಹಾಗೂ
ಗುರುವಾರ ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಇಲ್ಲಿಗೆ ಬರುವ
ಭಕ್ತರು, ದೇವರನ್ನು ಪೂಜಿಸಿ, ನಂದಿಯ ಬಾಯಿಂದ ಶಿವಲಿಂಗದ ಮೇಲೆ ಬಿದ್ದು ಕಲ್ಯಾಣಿಗೆ
ಹರಿವ ನೀರನ್ನು ತೀರ್ಥವೆಂದು ಸ್ವೀಕರಿಸುತ್ತಾರೆ ಎನ್ನುತ್ತಾರೆ ದೇವಾಲಯದ ಪ್ರಧಾನ
ಅರ್ಚಕರಾದ ಶಿವಶಂಕರ ಭಟ್ ಅವರು.
ಈ
ನೀರು ಕುಡಿವ ಭಕ್ತರಲ್ಲಿ ನವಚೈತನ್ಯ ಮೂಡುತ್ತದೆ, ಚರ್ಮವ್ಯಾದಿಯೇ ಮೊದಲಾದ ರೋಗಗಳು
ನಿವಾರಣೆಯಾಗಿವೆ. ಕೆಲವು ಭಕ್ತರು ವಿದೇಶಕ್ಕೂ ಈ ತೀರ್ಥವನ್ನು ಕಳುಹಿಸುತ್ತಾರೆ
ಎನ್ನುತ್ತಾರೆ ಅವರು.
ಮನೆ
ಕಟ್ಟುವವರು ಗುದ್ದಲಿ ಪೂಜೆಗೆ, ಕೊಳವೆ ಬಾವಿ ತೋಡಿಸುವವರು ಗಂಗಾಪೂಜೆಗೆ, ಮದುವೆ,
ಮುಂಜಿ ಇತ್ಯಾದಿ ಶುಭ ಸಮಾರಂಭಗಳಿಗೂ ಭಕ್ತರು ಇಲ್ಲಿಂದ ಪವಿತ್ರತೀರ್ಥವನ್ನು
ಬಾಟಲಿಗಳಲ್ಲಿ ಕ್ಯಾನ್ ಗಳಲ್ಲಿ ಕೊಂಡೊಯ್ಯುತ್ತಾರೆ.
ಇಲ್ಲಿರುವ ಶಿವಲಿಂಗ ನಾಗಾಭರಣ ಅಲಂಕಾರದಲ್ಲಿ ಸುಂದರವಾಗಿ ಕಂಗೊಳಿಸುತ್ತದೆ.
ರಾತ್ರಿಯ ವೇಳೆ ದೀಪಾಲಂಕಾರದಲ್ಲಿ ಶಿವಲಿಂಗ ದರ್ಶನ ವರ್ಣನಾತೀತ ಅನುಭವ ನೀಡುತ್ತದೆ.
ಶಿವಲಿಂಗ ಹಾಗೂ ನಂದಿಯ ಹಿಂಭಾಗದ ಭಿತ್ತಿಗಳಲ್ಲಿ ಸುಂದರ ಕೆತ್ತನೆಗಳೂ ಇವೆ. ಈಗ
ಪ್ರವೇಶ ದ್ವಾರದಲ್ಲಿ ಗೋಪುರ ನಿರ್ಮಿಸಲಾಗಿದೆ. ಗೋಪುರದಲ್ಲಿ ಶಿವಪಾರ್ವತಿ
ಹಾಗೂ ಮೇಲ್ಭಾಗದಲ್ಲಿ ನಂದಿಯ ಮೂರ್ತಿಯೂ ಇದೆ.
ದೇವಾಲಯ ಪ್ರವೇಶಿಸುತ್ತಿದ್ದಂತೆ ಶಿವದರ್ಶನಕ್ಕೆ ಮುನ್ನ
ಗಣಪತಿಯ ದರ್ಶನವಾಗುತ್ತದೆ.
ದೇವಾಲಯದ ಮುಂದೆ ಕಲ್ಯಾಣಿ
ಇದೆ. ಇಲ್ಲಿ ಹತ್ತಾರು ಆಮೆಗಳೂ ಇವೆ.
ಹೆಚ್ಚಿನ ವಿವರಗಳಿಗೆ ಪ್ರಸನ್ನ ಭಟ್ ಅವರನ್ನು ಮೊಬೈಲ್
ಸಂಖ್ಯೆ 9008665678ರಲ್ಲೂ ರವಿಶಂಕರ ಭಟ್ ಅವರನ್ನು 9980490414ರಲ್ಲೂ
ಸಂಪರ್ಕಿಸಬಹುದು.
ಪೂಜಾ ಸಮಯ:
ಬೆಳಗ್ಗೆ 7ರಿಂದ ಮಧ್ಯಾಹ್ನ 12-30, ಸಂಜೆ 5ರಿಂದ ರಾತ್ರಿ 8-30ರವರೆಗೆ.
ಮುಖಪುಟ
/ನಮ್ಮದೇವಾಲಯಗಳು |