|
ಮುಖಪುಟ
/ನಮ್ಮ
ದೇವಾಲಯಗಳು ಮ್ಯಾಜಿಸ್ಟ್ರೇಟ್ ಕೋರ್ಟ್ ನ ಶ್ರೀಧರ್ಮಾಧಿಪ ಗಣಪತಿ
ಇಲ್ಲಿರುವುದು ಅಗ್ರವಂದಿಪನಾದ ಧರ್ಮಾಧಿಪ ಗಣಪತಿ ದೇವಾಲಯ. ಕೋರ್ಟ್ ಆವರಣದಲ್ಲಿ ಈಗಿರುವ ದೇವಾಲಯ ನಿರ್ಮಾಣವಾಗಿ 35 ವರ್ಷ ಕಳೆದಿದೆ. ಆದರೆ, ಈ ದೇವಾಲಯದಲ್ಲಿರುವ ಗಣಪತಿ ಮೂರ್ತಿ ನಿರ್ಮಾಣವಾಗಿ ಶತಮಾನವೇ ಕಳೆದಿದೆ. ಬೆಂಗಳೂರು ಮಹಾನಗರ ಪಾಲಿಕೆ ಕಟ್ಟಡದ ಬಳಿಯ ಬ್ರಿಯಾಂಡ್ ಸ್ಕ್ವೇರ್ (ಈಗಿನ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ) ಬಳಿ ಈಗಿರುವ ಮಾಜಿಸ್ಟ್ರೇಟ್ ಕೋರ್ಟ್ ನ ನೂತನ ಕಟ್ಟವಿರುವ ಜಾಗದಲ್ಲಿ ಬಹಳ ಹಿಂದೆಯೇ ಪುರಾತನವಾದ ದೇವಾಲಯವೊಂದಿತ್ತು. ಇದರ ಪಕ್ಕದಲ್ಲೇ ಇದ್ದ ಹಳೆಯ ಕಟ್ಟಡದಲ್ಲಿ ನ್ಯಾಯಾಲಯದ ಕಲಾಪಗಳು ನಡೆಯುತ್ತಿದ್ದವು. ಈಗ್ಗೆ 35 ವರ್ಷಗಳ ಹಿಂದೆ ಇಲ್ಲಿ ನೂತನ ಬಹು ಅಂತಸ್ತಿನ ನ್ಯಾಯಾಲಯ ಸಮುಚ್ಚಯ ನಿರ್ಮಾಣ ಮಾಡಲು ಮುಂದಾದಾಗ ಶಿಥಿಲವಾಗಿದ್ದ ದೇವಾಲಯ ತೆರವು ಮಾಡುವುದು ಅನಿವಾರ್ಯವಾಯಿತು. ಆಗ ಹೊಟೆಲ್ ನಾರಾಯಣರಾಯರು, ಹಿರಿಯ ವಕೀಲರಾಗಿದ್ದ ದಿವಂಗತ ಸುಬ್ಬರಾವ್ ಮತ್ತಿತರರು ಆ ದೇವಾಲಯದಲ್ಲಿದ್ದ ಮೂರ್ತಿಯನ್ನು ಈಗಿರುವ ಜಾಗದಲ್ಲಿ ಪ್ರತಿಷ್ಠಾಪಿಸಿ ಚಿಕ್ಕದೊಂದು ಮಂಟಪ ನಿರ್ಮಿಸಿದರು.
ನಂತರ ಗಣಪತಿ ದೇವಾಲಯಕ್ಕೆ ಶಾಶ್ವತ ಕಟ್ಟಡ ನಿರ್ಮಿಸಿದ್ದು ಮಾಜಿಸ್ಟ್ರೇಟ್ ಕೋರ್ಟ್ ನ ವಕೀಲರ ಸಂಘ. ಅಂದಿನಿಂದ ದೇವಾಲಯದ ನಿರ್ವಹಣೆಯ ಹೊಣೆಯನ್ನೂ ಸಂಘವೇ ವಹಿಸಿಕೊಂಡಿತು. 1995ರಲ್ಲಿ ಈ ದೇವಾಲಯಕ್ಕೆ ಸುಂದರ ಗೋಪುರ ನಿರ್ಮಿಸಿ, ಕಳಶ ಸ್ಥಾಪನೆ ಮಾಡಲಾಯಿತು. ದೇವಾಲಯ ಚಿಕ್ಕದಾದರೂ ಚೊಕ್ಕವಾಗಿದ್ದು, ದೇವಾಲಯದ ಗೋಪುರ ಸಹ ರಮಣೀಯವಾಗಿದೆ. ಗೋಪುರದಲ್ಲಿ ಗಣಪತಿ ಹಾಗೂ ಗಣಗಳ ಗಾರೆಯ ಪ್ರತಿಮೆಗಳವೆ. ದೇವಾಲಯಕ್ಕೆ ಪ್ರದಕ್ಷಿಣ ಪಥ ನಿರ್ಮಿಸಲಾಯಿತು. ದೇವಾಲಯದ ಸುತ್ತಲೂ ಹಾಗೂ ಗರ್ಭಗೃಹಕ್ಕೆ ಗ್ರಾನೈಟ್ ಮತ್ತು ಟೈಲ್ಸ್ ಹಾಕಲಾಯಿತು.
ಮಾಜಿಸ್ಟ್ರೇಟ್ ಕೋರ್ಟ್ ವಿಭಾಗದ ವಕೀಲರು ಸ್ವಯಂ ಪ್ರೇರಿತರಾಗಿ ದೇಣಿಗೆ ನೀಡಿ ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುತ್ತಾರೆ. ನ್ಯಾಯ ನೀಡುವ ಸ್ಥಳ ಧರ್ಮಕ್ಷೇತ್ರವಾದ ಕಾರಣ, ಇಲ್ಲಿರುವ ಗಣಪನಿಗೆ ಧರ್ಮಾಧಿಪ ಗಣಪನೆಂದೇ ಹೆಸರು ಬಂದಿದೆ. ನ್ಯಾಯಾಲಯಕ್ಕೆ ನ್ಯಾಯಕೋರಿ ಬರುವ ಕಕ್ಷಿದಾರರು, ತಮಗೆ ಜಯ ಸಿಗುವಂತೆ ಅನುಗ್ರಹಿಸೆಂದು ಗಣಪನ ಪೂಜೆ ಮಾಡಿಸುತ್ತಾರೆ. ವಕೀಲರು ಕೂಡ ತಾವು ನಡೆಸುತ್ತಿರುವ ಕೇಸ್ ನಲ್ಲಿ ತಮಗೆ ಜಯ ಲಭಿಸುವಂತೆ ಈ ದೇವರನ್ನು ಪೂಜಿಸುತ್ತಾರೆ. ಧರ್ಮಾಧಿಪ ಗಣಪ ಧರ್ಮದ ಪರ ಅನುಗ್ರಹ ನೀಡುತ್ತಾನೆಂದು ಈ ದೇವಾಲಯದ ಅರ್ಚಕರಾದ ವೇದಬ್ರಹ್ಮ ಶ್ರೀ ರಾಮಕೃಷ್ಣ ಉಡುಪ ತಿಳುಸುತ್ತಾರೆ. | |||