|
ಮುಖಪುಟ
/ನಮ್ಮ
ದೇವಾಲಯಗಳು
ಬೆಳವಾಡಿ ಉದ್ಭವ ಕಲ್ಲೇಶ್ವರಸ್ವಾಮಿ
ದೇವಾಲಯ
ಕಾಫಿ
ಮತ್ತು ಸಾಂಬಾರ ಪಾರ್ಥಗಳ ಕಣಜ ಎಂದೇ ಖ್ಯಾತವಾದ ಚಿಕ್ಕಮಗಳೂರು ಜಿಲ್ಲೆ, ಶಿಲ್ಪಕಲೆಗಳ
ಬೀಡೂ ಹೌದು. ಕಣ್ಣು ಹಾಯಿಸಿದಷ್ಟೂ ಕಾಣುವ ಕಾಫಿಯ ತೋಟಗಳು, ಗಿರಿಶಿಖರಗಳಿಂದ ಕೂಡಿದ
ಪ್ರಕೃತಿ ರಮಣೀಯವಾದ ಸುಂದರ ಪರಿಸರವಿರುವ ಈ ಜಿಲ್ಲೆಯಲ್ಲಿ ಹಲವು ಶಿಲ್ಪಕಲಾ ವೈಭವದಿಂದ
ಕೂಡಿದ ಹಾಗೂ ಮಹಿಮಾನ್ವಿತ ಕ್ಷೇತ್ರಗಳಿವೆ.
ಹೆಚ್ಚು
ಜನರಿಗೆ ತಿಳಿಯದ, ಸ್ಥಳೀಯರಿಗಷ್ಟೇ ಪರಿಚಯವಿರುವ ಹಲವು ದಿವ್ಯ ಕ್ಷೇತ್ರಗಳೂ ಇಲ್ಲಿವೆ.
ಇಂಥ ದೇವಾಲಯಗಳ ಪೈಕಿ ಒಂದು ಬೆಳವಾಡಿಯ ಶ್ರೀ ಉದ್ಭವ ಕಲ್ಲೇಶ್ವರಸ್ವಾಮಿ ದೇವಾಲಯ.
ಹೊಯ್ಸಳ
ದೊರೆಗಳ ಕಾಲದಲ್ಲಿ ಪ್ರಮುಖ ಜನವಸತಿ ಪ್ರದೇಶಗಳಲ್ಲಿ ದೇವಾಲಯಗಳ ನಿರ್ಮಾಣ ಕಾರ್ಯ
ನಡೆದಿದೆ. ಸಾಮಾನ್ಯವಾಗಿ ಹೊಯ್ಸಳರು ವಿಷ್ಣು ಮತ್ತು ಶಿವ ದೇವಾಲಯಗಳನ್ನು ಒಂದೇ
ಊರಿನಲ್ಲಿ ನಿರ್ಮಿಸಿರುವುದು ವಿಶೇಷ.
ಒಂದು
ಕಾಲದಲ್ಲಿ ಜೈನಕ್ಷೇತ್ರ ಎನಿಸಿಕೊಂಡಿದ್ದ ಹಳೆ ಬೆಳವಾಡಿಯಲ್ಲಿರುವ ಶ್ರೀ ಕಲ್ಲೇಶ್ವರನ
ದೇವಾಲಯದಲ್ಲಿರುವ ಲಿಂಗ ಸ್ವಯಂಭು ಎಂದೂ ಹೇಳಲಾಗುತ್ತದೆ. ಮಹಾಭಾರತದ ಕಾಲದಲ್ಲಿ ಬೆಳವಾಡಿ
ಏಕಚಕ್ರನಗರವಾಗಿತ್ತು. ವನವಾಸಿಗಳಾದ ಪಾಂಡವರು, ಇಲ್ಲಿ ಬಂದು ನೆಲೆಸಿದ್ದರು. ಇಲ್ಲಿ
ಪ್ರಜಾಪೀಡಕನಾಗಿದ್ದ ಬಕಾಸುರನಿಗೆ ಊರಿನ ಜನ ನಿತ್ಯ ಒಂದು ಬಂಡಿ (ಎತ್ತಿನಗಾಡಿ) ಊಟ ಹಾಗೂ
ಒಬ್ಬ ಮನುಷ್ಯನನ್ನು ಆಹಾರವಾಗಿ ಕಳುಹಿಸುತ್ತಿದ್ದರು. ಈ ವಿಷಯ ತಿಳಿದ ಭೀಮ ಒಂದು ದಿನ
ತಾನೇ ಬಂಡಿಯೊಂದಿಗೆ ಹೋಗಿ, ಬಂಡಿಯಲ್ಲಿದ್ದ ಆಹಾರವನ್ನೆಲ್ಲಾ ತಾನೇ ತಿಂದು,
ಬಕಾಸುರನನ್ನು ವಧಿಸಿದನೆಂದು ಹೇಳಲಾಗುತ್ತದೆ. ಇಂದಿಗೂ ಈ ಊರ ಜನ ಭೀಮನಿಗೆ ಕೃತಜ್ಞತೆ
ಅರ್ಪಿಸಲು ಬಂಡಿಹಬ್ಬ ಆಚರಿಸುತ್ತಾರೆ.
ಇಲ್ಲಿ
ಪಾಂಡವರು ಉದ್ಭವ ಲಿಂಗಕ್ಕೆ ಶಿವಪೂಜೆ ಮಾಡಿದ್ದರು ಎಂದೂ ನಂಬಲಾಗಿದೆ. ಕಲ್ಲೇಶ್ವರ
ಸ್ವಾಮಿಯ ದೇವಾಲಯವನ್ನು ಕ್ರಿ.ಶ.1200ರ ಸುಮಾರಿನಲ್ಲಿ 2ನೇ ವೀರಬಲ್ಲಾಳನ ಕಾಲದಲ್ಲಿ
ನಿರ್ಮಿಸಲಾಗಿದೆ.
ಗರ್ಭಗೃಹ,
ನವರಂಗವಿರುವ ಈ ದೇವಾಲಯದ ಸ್ವರೂಪವೇ ಈಗ ಬದಲಾಗಿದೆ. ಹೊರಗೆ ಆಧುನಿಕ ಕಟ್ಟಡದಿಂದ ಕೂಡಿದ
ದೇವಾಲಯದ ಗರ್ಭಗೃಹ ಹಾಗೂ ಮುಂದಿನ ಆವರಣ ಪುರಾತನತೆಯನ್ನು ಕಾಪಾಡಿಕೊಂಡಿದೆ.
ಗರ್ಭಗೃಹದಲ್ಲಿ
ಸುಂದರವಾದ
ಶಿವಲಿಂಗವಿದ್ದು, ಗರ್ಭಗೃಹದ ಮುಂದಿರುವ ಕಲ್ಲಿನ ಬಾಗಿಲವಾಡದಲ್ಲಿ ಜಾಲಂದ್ರವಿದ್ದು,
ಕುಂಭಗಳ ಉಬ್ಬುಶಿಲ್ಪವಿದೆ. ಶಿವಲಿಂಗದ ಎದುರು ನಂದಿಯ ವಿಗ್ರಹವಿದೆ. ದೇವಾಲಯದ ಒಳಗಿರುವ
ಕಂಬಗಳಲ್ಲಿ ಸೂಕ್ಷ್ಮ ಕೆತ್ತನೆಗಳು ಇಲ್ಲದಿದ್ದರೂ ಬೃಹದಾಕಾರವಾದ ಆಧಾರ ಸ್ತಂಭಗಳ ಕೆಳಭಾಗ
ಚೌಕಾಕಾರವಾಗಿದ್ದು, ಅದರ ಮೇಲೆ ಅಷ್ಟಕೋಣಾಕೃತಿಯ ಒಂದು ಪಟ್ಟಿಕೆಯಿದ್ದು, ಮತ್ತೆ
ಮೇಲ್ಭಾಗ ವೃತ್ತಾಕಾರವಾಗಿದೆ. ಮೇಲ್ಭಾಗದಲ್ಲಿರುವ ಚೌಕಾಕಾರದಲ್ಲಿ ಶಾಸನವೂ ಇದೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ
ದೇವಾಲಯದ ನಿರ್ವಹಣೆಗಾಗಿ ಆಡಳಿತ ಮಂಡಳಿಯೂ ಇತ್ತಾದರೂ, ಯಾರೊಬ್ಬರೂ ದೇವಾಲಯದ
ಅಭಿವೃದ್ಧಿಯ ಬಗ್ಗೆ ಚಿಂತಿಸದ ಕಾರಣ ಪುರಾತನವಾದ ಈ ದೇಗುಲ ಸಂಪೂರ್ಣ ಶಿಥಿಲವಾಗಿ
ಕುಸಿದಿತ್ತು. ಪೂಜೆ ಪುನಸ್ಕಾರಗಳು ಇಲ್ಲದಾಗಿತ್ತು.
ಶೋಚನೀಯ
ಸ್ಥಿತಿಯಲ್ಲಿದ್ದ ಈ ದೇವಾಲಯದ ದುಸ್ಥಿತಿ ಕಂಡು ಮರುಗಿದ ಎ.ವಿ. ನಾಗರಾಜ್ ಅವರು,
2006ರಲ್ಲಿ ಅಗಿಲೆ ಕುಟುಂಬದ ವತಿಯಿಂದ ದೇವಾಲಯದ ಜೀರ್ಣೋದ್ಧಾರಕ್ಕೆ ಮುಂದಾಗಿ, ಮುಜರಾಯಿ
ಇಲಾಖೆಯಿಂದ ಅನುಮತಿ ಪಡೆದು, ಕುಟುಂಬದ ಸದಸ್ಯರು, ಸ್ನೇಹಿತರು, ಗೆಳೆಯರು, ಸ್ಥಳೀಯರಿಂದ
ಹಣ ಸಂಗ್ರಹಿಸಿ 9 ತಿಂಗಳಲ್ಲಿ ದೇವಾಲಯವನ್ನು ಅಭಿವೃದ್ಧಿ
ಪಡಿಸಿದ್ದಾರೆ.
ದೇವಾಲಯಕ್ಕೆ ಈಗ ಭವ್ಯ ಹಾಗೂ ಗಟ್ಟಿಮುಟ್ಟಾದ ಕಟ್ಟಡವಿದೆ. ಮೇಲೆ ಆರ್.ಸಿ.ಸಿ. ಛಾವಣಿ
ಇದೆ. ಹೊರಗಿನಿಂದ ಹೊಸ, ಆಧುನಿಕ ಶೈಲಿಯ ದೇವಾಲಯದಂತೆ ಕಂಡರೂ, ಒಳಗೆ ದೇವಾಲಯದ
ಪುರಾತನತೆಯನ್ನು ಕಾಪಾಡಿಕೊಳ್ಳಲಾಗಿದೆ. ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ 2007ರ
ಜನವರಿ 20ರಂದು ಶ್ರೀ ಉದ್ಭವ ಕಲ್ಲೇಶ್ವರ ಸ್ವಾಮಿಯನ್ನು ಮರು ಪ್ರತಿಷ್ಠಾಪಿಸಲಾಗಿದೆ.
ಹಳೆಯ ದೇವಾಲಯದಲ್ಲಿ
ಸಿಕ್ಕ ನಾಗರ ಕಲ್ಲುಗಳು ಹಾಗೂ ಬಸವನ ವಿಗ್ರಹವನ್ನು ಸಂರಕ್ಷಿಸಲಾಗಿದೆ.
ಜೀರ್ಣೋದ್ಧಾರ ಕಾರ್ಯಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ ಹಾಗೂ
ಶೃಂಗೇರಿ ಶಂಕರಮಠದ ಆಡಳಿತಾಧಿಕಾರಿ ಗೌರಿಶಂಕರ್ ಅವರು
ಸಹ ಆರ್ಥಿಕವಾಗಿ ನೆರವು ನೀಡಿದರು. ಈಗ ದೇವಾಲಯದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ.
ಸಾರ್ವಜನಿಕರು ಮುಂದೆ ಬಂದರೆ ದೇವಾಲಯವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬಹುದು ಎಂಬುದು
ನಾಗರಾಜ್ ಅವರ ಅನಿಸಿಕೆ.
ಮಾರ್ಗ :
ಚಿಕ್ಕಮಗಳೂರಿನಿಂದ ಬಾಣಾವರಕ್ಕೆ
ಹೋಗುವ ದಾರಿಯಲ್ಲಿ 20 ಕಿಮೀ ದೂರದಲ್ಲಿರುವುದೇ ಬೆಳವಾಡಿ. ಇಲ್ಲಿ ಸುಂದರವಾದ ಹೊಯ್ಸಳ
ಶೈಲಿಯ ವೀರನಾರಾಯಣ ಸ್ವಾಮಿ ದೇವಾಲಯವೂ ಇದೆ.
ಮುಖಪುಟ
/ನಮ್ಮದೇವಾಲಯ |