|
ಮುಖಪುಟ
/ನಮ್ಮದೇವಾಲಯಗಳು
ಬಸರಾಳು ಮಲ್ಲಿಕಾರ್ಜುನ
ದೇವಸ್ಥಾನ
*ಟಿ.ಎಂ.ಸತೀಶ್
ಮೂರು ಗರ್ಭಗುಡಿಗಳನ್ನು ಹೊಂದಿರುವ ದೇವಾಲಯ ತ್ರಿಕೂಟಾಚಲ ಎಂದೇ ಖ್ಯಾತವಾಗಿದೆ. ಗರ್ಭಗುಡಿಗಳಲ್ಲಿ ಮಲ್ಲಿಕಾರ್ಜುನ, ಸೂರ್ಯನಾರಾಯಣ ಹಾಗೂ ನಾಗ ನಾಗಿಣಿಯರ ವಿಗ್ರಹವಿದೆ. ಎಲ್ಲ ಹೊಯ್ಸಳ ದೇವಾಲಯಗಳಂತೆ ಈ ದೇವಾಲಯವೂ ನಾಲ್ಕಡಿ ಎತ್ತರದ ನಕ್ಷತ್ರಾಕಾರದ ಜಗತಿಯ ಮೇಲಿದೆ. ದೇವಾಲಯದ ಒಳ ಪ್ರವೇಶಿಸಲು 8-10 ಮೆಟ್ಟಿಲುಗಳಿವೆ. ಮೆಟ್ಟಿಲುಗಳ ಎರಡೂ ಕಡೆಗಳಲ್ಲಿ ಗೋಪುರಾಕಾರದ ಪುಟ್ಟ ಗುಡಿಗಳಿವೆ. ಐದು ಮೆಟ್ಟಿಲುಗಳೇರುತ್ತಿದ್ದಂತೆ ಪ್ರವೇಶದ್ವಾರದ ಎರಡೂ ಬದಿಯಲ್ಲಿರುವ ಆನೆಗಳ ಸುಂದರ ಮೂರ್ತಿ ಮನಸೆಳೆಯುತ್ತವೆ.
ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೇ ನರಸಿಂಹನ ಕಾಲದಲ್ಲಿ ಅಂದರೆ 1234ರಲ್ಲಿ ಹರಿಹರ ದಂಡನಾಯಕ ನಿರ್ಮಿಸಿದನೆಂದು ತಿಳಿದುಬರುತ್ತದೆ. ದೇವಾಲಯದಲ್ಲಿರುವ 16 ಕೈಗಳ ನೃತ್ಯಭಂಗಿಯ ನಟರಾಜ ಮೂರ್ತಿ, 22 ಭುಜಗಳ ದುರ್ಗಾ ಮಾತೆ, ಮತ್ತು ಸರಸ್ವತಿಯ ಮೂರ್ತಿಗಳು ಮನಮೋಹಕವಾಗಿವೆ. ರಾವಣ ಕೈಲಾಸಗಿರಿಯನ್ನು ಎತ್ತುತ್ತಿರುವ ದೃಶ್ಯ, ಮತ್ಸ್ಯಯಂತ್ರ ಭೇದಿಸುತ್ತಿರುವ ಅರ್ಜುನ, ಮಾಲೆ ಹಿಡಿದ ದ್ರೌಪದಿ ಮೊದಾಲದ ಶಿಲ್ಪ ಕಥಾನಕಗಳು ಮನಸೂರೆಗೊಳ್ಳುತ್ತವೆ. ಮಂಡ್ಯದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಬಸರಾಳುವಿಗೆ ನೇರ ಬಸ್ ಸೌಕರ್ಯವಿದೆ. | |||